ಬೆಂಗಳೂರು: ನಲಪಾಡ್ ಯೂತ್ ಕಾಂಗ್ರೆಸ್ ಹೆಸರೇಳಿಕೊಂಡು ವಿದ್ಯಾರ್ಥಿಗೆ ಕಿರಿಕುಳ ನೀಡಿರುವ ಆರೋಪ ಕೇಳಿ ಬಂದಿದ್ದು ಕೆಂಗೇರಿ ಪೊಲೀಸ್ ಠಾಣೆಯಲ್ಲಿ 9 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೆಲ ಕಿಡಿಗೇಡಿಗಳು ನಾವು ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಕಡೆಯ ಹುಡುಗರು ಎಂದು ಹೇಳಿಕೊಂಡು ವಿದ್ಯಾರ್ಥಿಯೊಬ್ಬನನ್ನು ಕಿಡ್ನಾಪ್ ಮಾಡಿ ಆತನ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ. ಸದ್ಯ ಈಗ ಈ ಕುರಿತು ವಿದ್ಯಾರ್ಥಿ ದೂರು ನೀಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.
ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿರುವ ಜೀವನ್ ಜೈನ್ ಎಂಬ ವಿದ್ಯಾರ್ಥಿ ಕಳೆದ ವರ್ಷ ಆಯುಷ್ ಶ್ರೀನಿವಾಸ್ ಎಂಬಾತನಿಂದ ಮೂರು ಲಕ್ಷ ಸಾಲ ಪಡೆದಿದ್ದ. ಇವೆಂಟ್ ಒಂದರ ವಿಚಾರವಾಗಿ ಹಣ ಪಡೆದಿದ್ದ. ಆದರೆ ಕಾರಣಾಂತರಗಳಿಂದಾಗಿ ಜೀವನ್ಗೆ ಹೇಳಿದ ಸಮಯಕ್ಕೆ ಹಣ ನೀಡಲು ಆಗಿರಲಿಲ್ಲ. ತಡವಾಗಿ ಸಾಲ ತೀರಿಸಿದ್ದ. ಆದರೆ ಕಿಡಿಗೇಡಿಗಳು ಸಾಲ ತೀರಿಸಿದರೂ ಆತನನ್ನು ಬಿಡದೆ ಮತ್ತಷ್ಟು ಹಣಕ್ಕಾಗಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ದೂರಿನಲ್ಲಿ ಒಂಬತ್ತು ಜನರ ವಿರುದ್ಧ ಕಿಡ್ನಾಪ್ ಹಾಗೂ ಸುಲಿಗೆ ಮಾಡಿರೋ ಆರೋಪ ಮಾಡಿ ಯುವಕ ದೂರು ನೀಡಿದ್ದಾನೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.