ಬೆಂಗಳೂರು: ದೇಶದ ಪ್ರತಿಷ್ಠಿತ ಬ್ಯಾಂಕ್ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ ಜುಲೈ ೫ ರಂದು ಅತ್ಯಾಧುನಿಕ ‘ಟೆಕ್ನಾಲಜಿ ಮತ್ತು ಡಿಜಿಟಲ್ ಹಬ್’ ಅನ್ನು ಬೆಂಗಳೂರಿನ ಆರ್ಟಿಸೇನ್ ಆರ್ಪಿಎಸ್ ಟೆಕ್ ಸೆಂಟರ್ನಲ್ಲಿ ಪ್ರಾರಂಭಿಸಿದ್ದು, ಬ್ಯಾಂಕಿನ ಎಲ್ಲ ಡಿಜಿಟಲ್ ಚಟುವಟಿಕೆಗಳು ಒಂದೇ ಸೂರಿನಡಿ ಈ ಕೇಂದ್ರದ ಮೂಲಕ ನಡೆಯಲಿದೆ.
‘ಟೆಕ್ನಾಲಜಿ ಮತ್ತು ಡಿಜಿಟಲ್ ಹಬ್’ ಅನ್ನು ಉದ್ಘಾಟಿಸಿ ಮಾತನಾಡಿದ ಬ್ಯಾಂಕಿನ ಚೇರ್ಮನ್ ಪಿ. ಪ್ರದೀಪ್ ಕುಮಾರ್ ಅವರು “ಬ್ಯಾಂಕ್ ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ ಹೊಸದಾಗಿ ತೆರೆಯಲಾದ ಈ ತಂತ್ರಜ್ಞಾನ ಕೇಂದ್ರವು ಬ್ಯಾಂಕಿನ ಬೆಳವಣಿಗೆಯ ಪಯಣವನ್ನು ಇನ್ನಷ್ಟು ವೇಗಗೊಳಿಸಲಿದೆ. ಬ್ಯಾಂಕಿನ ಆಧಾರ ಸ್ತಂಭಗಳಾದ ಶಾಖೆಗಳಿಗೆ ಈ ತಂತ್ರಜ್ಞಾನ ಕೇಂದ್ರವು ಮತ್ತಷ್ಟು ಬಲತುಂಬಿ ಹೊಸಪೀಳಿಗೆಯ ಗ್ರಾಹಕರನ್ನು ತಲುಪುವಲ್ಲಿ ಸಹಕಾರಿಯಾಗಿ ಬ್ಯಾಂಕಿನ ವಹಿವಾಟು ಅಭಿವೃದ್ಧಿಗೊಳ್ಳಲಿದೆ” ಎಂದು ನುಡಿದರು.
ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಓ ಶ್ರೀಕೃಷ್ಣನ್ ಹೆಚ್ ಅವರು ಮಾತನಾಡಿ “ಟೆಕ್ನಾಲಜಿ ಮತ್ತು ಡಿಜಿಟಲ್ ಹಬ್ ‘ಕಂಪ್ಯೂಟಿಂಗ್ ಮತ್ತು ಅನಾಲಿಟಿಕ್ಸ್’ ಶಕ್ತಿಯನ್ನು ಬಳಸಿಕೊಂಡು ನವೀನ ಡಿಜಿಟಲ್ ತಂತ್ರಜ್ಞಾನಗಳಿಗೆ ಚಾಲನೆ ನೀಡಿ, ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಬ್ಯಾಂಕನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲಿದೆ” ಎಂದು ನುಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್, ನಿರ್ದೇಶಕರುಗಳಾದ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್, ಉಮಾಶಂಕರ್, ಡಾ. ಡಿ.ಎಸ್. ರವೀಂದ್ರನ್, ಬಾಲಕೃಷ್ಣ ಅಲ್ಸೆ ಎಸ್., ಜೀವನದಾಸ ನಾರಾಯಣ, ಗುರುರಾಜ ಆಚಾರ್ಯ, ಚೀಫ್ ಆಪರೇಟಿಂಗ್ ಆಫೀಸರ್ ಬಾಲಚಂದ್ರ ವೈ.ವಿ., ಚೀಫ್ ಬಿಸಿನೆಸ್ ಆಫೀಸರ್ ಗೋಕುಲ್ ದಾಸ್ ಪೈ, ಜನರಲ್ ಮ್ಯಾನೇಜರ್ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಅನಂತಪದ್ಮನಾಭ ಬಿ. ಹಾಗು ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.