ಬೆಂಗಳೂರು: ನಾನು ಕೂಡಾ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ಕೊಟ್ಟಿದ್ದೇನೆ. ಸ್ಥಳೀಯ ಆರ್ಎಸ್ಎಸ್ ನಾಯಕರು ಹಣ ತೆಗೆದುಕೊಂಡು ಹೋಗಿದ್ದರು. ಆದರೆ, ಈಗ ನನಗೆ ಆಹ್ವಾನ ನೀಡಿಲ್ಲ ಎಂದು ಮಾಜಿ ಡಿಸಿಎಂ, ಕಾಂಗ್ರೆಸ್ ಮುಖಂಡ ಲಕ್ಷ್ಮಣ ಸವದಿ ಬೇಸರ ವ್ಯಕ್ತಪಡಿಸಿದ್ದಾರೆ.
ವಿಕಾಸಸೌಧಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ರಾಮ ಮಂದಿರಕ್ಕಾಗಿ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿ ಅವರು ರಥಯಾತ್ರೆ ಮಾಡಿದ್ದರು. ಆದರೆ, ಅವರೇ ಈಗ ರಾಮ ಮಂದಿರ ಉದ್ಘಾಟನೆಗೆ ಬರಬಾರದು ಅಂತ ಸಂದೇಶ ಕೊಡೋದು ಎಷ್ಟು ಸರಿ? ರಾಮ ಮಂದಿರ ಆಗೋಕೆ ಆಡ್ವಾಣಿ ಕಾರಣ. ಈಗ ಅವರನ್ನೇ ಬರಬಾರದು ಎಂದು ಹೇಳುವ ಬಿಜೆಪಿಯವರಿಗೆ ಎಲ್ಲಿ ನೈತಿಕತೆ ಇದೆ? ಎಂದು ಪ್ರಶ್ನೆ ಮಾಡಿದರು.
ಆಡ್ವಾಣಿ ಅವರನ್ನೇ ಬರಬೇಡಿ ಎಂದು ಹೇಳಿದ ಮೇಲೆ ಇನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ಕೊಡದೇ ಇರುವ ವಿಷಯ ದೊಡ್ಡದು ಅಲ್ಲ. ಬಿಜೆಪಿ ಅವರು ಮೊದಲು ಹಿಂದು ಹಿಂದು ಎಂದು ಹೇಳುತ್ತಾರೆ. ಯಾವಾಗ ಅಧಿಕಾರ ಬರುತ್ತದೋ ಆಗ ನಾವು ಮುಂದು, ನೀವು ಹಿಂದೆ ಅಂತಾರೆ ಎಂದು ಲಕ್ಷ್ಮಣ ಸವದಿ ಟೀಕಿಸಿದರು.