ಬೆಂಗಳೂರು: ಪರ್ಫ್ಯೂಮ್ ಕಾರ್ಖಾನೆಯಲ್ಲಿ ಹೈ ಫ್ಲೇಮ್ ಗ್ಯಾಸ್ನಿಂದಾಗಿ ಅಗ್ನಿ ಅವಘಡ ಸಂಭವಿಸಿದ್ದು ಇಬ್ಬರು ಮೃತಪಟ್ಟ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿ ನಡೆದಿದೆ.
ಮೃತರನ್ನು ಸಲೀಂ ಹಾಗೂ ಮೆಹಬೂಬ್ ಎಂದು ಗುರುತಿಸಲಾಗಿದೆ.
ಮೃತ ಸಲೀಂ ಗುಜರಿ ವ್ಯಾಪಾರ ಮಾಡುತ್ತಿದ್ದನು. ಜಾಗದ ಮಾಲೀಕ ವಿಠಲ್ ಹಾಗೂ ಸಲೀಂ ಒಂದೇ ಗ್ರಾಮದವರು. ಇಬ್ಬರು ಸೇರಿ ಒಂದು ವಾರದ ಹಿಂದೆ ಗುಜರಿ ಅಂಗಡಿ ಪ್ರಾರಂಭಿಸಿದ್ದರು. ಈ ಅಂಗಡಿಯಲ್ಲಿ ಲೋಡ್ಗಟ್ಟಲೆ ಖಾಲಿಯಾದ ಪರ್ಫ್ಯೂಮ್ ಬಾಟಲಿಗಳನ್ನು ಸಂಗ್ರಹಿಸಿ, ಅವುಗಳನ್ನು ನಜ್ಜುಗುಜ್ಜು ಮಾಡಿ ವಿಲೇವಾರಿ ಮಾಡುತ್ತಿದ್ದರು. ಈ ಗುಜುರಿ ಅಂಗಡಿಯಲ್ಲಿ ಮೂರು ಲಕ್ಷಕ್ಕೂ ಅಧಿಕ ಪರ್ಫ್ಯೂಮ್ ಬಾಟಲ್ಗಳನ್ನು ಜಮಾವಣೆ ಮಾಡಲಾಗಿತ್ತು.
ಆದರೆ ಇತ್ತೀಚಿಗೆ ಅಕ್ರಮವಾಗಿ ಖಾಲಿ ಪರ್ಫ್ಯೂಮ್ ಬಾಟಲ್ಗಳಲ್ಲಿ ಪರ್ಫ್ಯೂಮ್ ತುಂಬುವ ಕೆಲಸ ಮಾಡುತ್ತಿದ್ದರು. ಮೃತ ಚಾಲಕ ಮೆಹಬೂಬ್ ಪೋರ್ಟರ್ ಆ್ಯಪ್ ಮುಖಾಂತರ ಲೋಡ್ ಬುಕ್ ಮಾಡಿಕೊಳ್ಳುತ್ತಿದ್ದನು. ಅದರಂತೆ ಮೆಹಬೂಬ್ ಖಾಲಿ ಪರ್ಫ್ಯೂಮ್ ಬಾಟಲ್ಗಳನ್ನು ಲೋಡ್ ಮಾಡಿಕೊಂಡು ಇಲ್ಲಿ ಅನ್ಲೋಡ್ ಮಾಡಿದ್ದಾನೆ. ಮೆಹಬೂಬ್ ಮೊದಲ ಬಾರಿಗೆ ಪರ್ಫ್ಯೂಮ್ ಕಾರ್ಖಾನೆಗೆ ತೆರಳಿದ ಹಿನ್ನೆಲೆಯಲ್ಲಿ ಒಳಗಡೆ ಏನಿದೆ ಅಂತ ಸಹಜ ಕುತೂಹಲದಿಂದ ಗೊಡೌನ್ ಒಳಗಡೆ ತೆರಳಿದ್ದಾನೆ.
ಒಳಗಡೆ ಸುತ್ತಾಡಿ ಹೊರಗಡೆ ಬರುವಾಗ ದೂರವಾಣಿ ಕರೆ ಬಂದಿದೆ. ಆಗ ಮೆಹಬೂಬ್ ಗೋಡೌನ್ನಲ್ಲೇ ನಿಂತು ಮಾತನಾಡಲು ಆರಂಭವಿಸಿದ್ದಾನೆ. ಈ ವೇಳೆಗಾಗಲೆ ಹೈ ಫ್ಲೇಮ್ ಪರ್ಫ್ಯೂಮ್ ಗ್ಯಾಸ್ ಎಲ್ಲಡೆ ಹಬ್ಬಿತ್ತು. ಇದರಿಂದ ಒಮ್ಮೇಲೆ ಬೆಂಕಿ ಹೊತ್ತಿಕೊಂಡಿದೆ. ಈ ಸಮಯದಲ್ಲಿ ಮೆಹಬೂಬುಗೆ ಹೊರಗೆ ಬರಲು ಸಾಧ್ಯವಾಗದೆ ಬೆಂಕಿಗಾಹುತಿಯಾಗಿದ್ದಾನೆ ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ಒಂದು ವಾರದ ಹಿಂದಷ್ಟೆ ಕೆಲಸಕ್ಕೆ ಸೇರಿದ್ದ ಇರ್ಫಾನ್, ಅಪ್ರೋಜ್ ಪಾಷಾ ಅವ್ರಿಗೂ ಗಾಯಗಳಾಗಿವೆ.
ಇರ್ಫಾನ್ ಪಾಷಾಗೆ ಊಟ ಕೊಡಲು ಅಪ್ರೋಜ್ ಪಾಷಾ, ಅಪ್ರೋಜ್ ಪಾಷಾರ ಮಗ ಮತ್ತು ಅಪ್ರೋಜ್ ಪಾಷಾರ ಅಕ್ಕನ ಮಗ ಕಾರ್ಖಾನೆಗೆ ಹೋಗಿದ್ದರು. ಈ ವೇಳೆ ಕಾರ್ಖಾನೆಯಲ್ಲಿ ಧಿಡೀರನೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೆ ಐವರು ಹೊರಗೆ ಓಡಿ ಬಂದರೂ, ಬೆಂಕಿ ತಗುಲಿತ್ತು. ಗಾಯಾಳುಗಳು ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.