ದಾವಣಗೆರೆ : ಜನವರಿ 26ರ ನಂತರ ರೇಷನ್ ಕೂಡ ಮನೆ ಬಾಗಿಲಿಗೆ ಬರಲಿದೆ. ಇದಕ್ಕಾಗಿ ಯೋಜನೆ ರೂಪಿಸಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದರು.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕು ಸುರಹೊನ್ನೆ ಗ್ರಾಮದಲ್ಲಿ ಶನಿವಾರ ಗ್ರಾಮ ವಾಸ್ತವ್ಯಕ್ಕೆ ಮರು ಚಾಲನೆ ನೀಡಿ ಮಾತನಾಡಿದರು. ಸರಕಾರ ವಿಧಾನ ಸೌಧದಲ್ಲಿದೆ ಎಂಬುದು ನಮ್ಮ ಭಾವನೆ. ಆದರೆ ನಿಜವಾದ ಸರಕಾರ ಗ್ರಾಮೀಣ ಪ್ರದೇಶದಲ್ಲಿದೆ. ಈ ತತ್ವದಡಿ ಇಡೀ ಸರಕಾರವನ್ನು ಜನರ ಮನೆ ಬಾಗಿಲಿಗೆ ತರಬೇಕು ಎಂಬ ಅಚಲ ನಿರ್ಧಾರ ನಮ್ಮದು ಎಂದರು.
ಅಭಿವೃದ್ಧಿ ಜನರ ಸುತ್ತ ಆಗಬೇಕು. ಅಭಿವೃದ್ಧಿ ಸುತ್ತ ಜನ ಸುತ್ತಾಡಬಾರದು ಎಂದ ಬೊಮ್ಮಾಯಿ, ಜನರ ಬಳಿ ಅಭಿವೃದ್ಧಿ ಹೋದಾಗ ಸ್ಥಿರ ಬದುಕು ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಜನವರಿ 26ರ ನಂತರ ನಿಮ್ಮ ರೇಷನ್ ನಿಮ್ಮಮನೆ ಬಾಗಿಲಿಗೆ ಬರುತ್ತದೆ. ಅಕ್ಕಿ ಬೇಳೆ ನಿಮ್ಮ ಮನೆಗೆ ತಲುಪಿಸಲು ಸಿದ್ಧತೆ ನಡೆಸಿದ್ದೇವೆ ಎಂದು ತಿಳಿಸಿದರು.
ಸಾಮಾಜಿಕ ಭದ್ರತೆ ಸೇವೆಗಳು ನಿಮ್ಮ ಮನೆಗೆ ಬರಬೇಕು ಎಂದ ಸಿಎಂ ಬೊಮ್ಮಾಯಿ, ಜನವರಿ 26ರ ನಂತರ ಎಲ್ಲ ಸೇವೆಗಳು ಗ್ರಾಮ ಪಂಚಾಯತಿಯಲ್ಲಿ ಸಿಗಬೇಕು, ಈ ನಿಟ್ಟಿನಲ್ಲಿ ಸರಕಾರ ಸಾಗಿದೆ. ಅಧಿಕಾರ ಹೆಪ್ಪುಗಟ್ಟಿ ವಿಧಾನಸೌಧದಲ್ಲಿ ಕೂರಬಾರದು. ಜೇನು ತುಪ್ಪದ ರೀತಿ ಗ್ರಾಮೀಣ ಭಾಗಕ್ಕೆ ಬರಬೇಕು ಎಂದು ನುಡಿದರು.