ದಾವಣಗೆರೆ:ಹೊನ್ನಾಳಿಯ ಪಲ್ಲವ ಪ್ರೌಢಶಾಲೆ, ಮಲೇಬೆನ್ನೂರಿನ ಬೀರಲಿಂಗೇಶ್ವರ ಮಹಿಳಾ ಕಾಲೇಜು, ವಡೇರಹತ್ತೂರಿನ ಮೊರಾರ್ಜಿ ದೇಸಾಯಿ ವಸತಿಶಾಲೆ ಸಹಿತ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಪತ್ತೆಯಾದ ವಿದ್ಯಾಸಂಸ್ಥೆಗಳನ್ನು ಒಂದು ವಾರದ ಮಟ್ಟಿಗೆ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಈಗಾಗಲೇ ತಾತ್ಕಾಲಿಕವಾಗಿ ಮುಚ್ಚಲಾಗಿರುವ ಸರ್ ಎಂ.ವಿ. ಕಾಲೇಜಿನಲ್ಲಿಯೂ ಮತ್ತೆ ನಾಲ್ಕು ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ ಎಂದು ಅವರು ವಿವರ ನೀಡಿದರು.
ದಾವಣಗೆರೆ ತಾಲ್ಲೂಕಿನ 163, ಹರಿಹರ ತಾಲ್ಲೂಕಿನ 31, ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳ ತಲಾ 19, ಜಗಳೂರು ತಾಲ್ಲೂಕಿನ 6 ಮಂದಿಗೆ ಕೊರೊನಾ ಬಂದಿದೆ.ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರಜಿಲ್ಲೆಯ 6 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 51,998 ಮಂದಿಗೆ ಸೋಂಕು ತಗುಲಿದೆ. 50,527 ಮಂದಿ ಗುಣಮುಖರಾಗಿದ್ದಾರೆ. 608 ಮಂದಿ ಮೃತಪಟ್ಟಿದ್ದಾರೆ. 863 ಸಕ್ರಿಯ ಪ್ರಕರಣಗಳಿವೆ.
863 ಸಕ್ರಿಯ ಪ್ರಕರಣಗಳಿದ್ದರೂ ಬಹುತೇಕರಿಗೆ ರೋಗ ಲಕ್ಷಣ ಇಲ್ಲ. 49 ಮಂದಿಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೂ ಗಂಭೀರ ಸ್ವರೂಪದ ರೋಗ ಲಕ್ಷಣಗಳಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.