ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರದ ಪರಿಸ್ಥಿತಿಯಿದೆ. ಮಳೆಕೊರತೆಯಿಂದ ಕುಡಿಯಲು ನೀರಿಲ್ಲದ ಸ್ಥಿತಿ ಎದುರಾಗಿದೆ. ಆದರೆ ರೈತರ ಕಲ್ಯಾಣಕ್ಕಾಗಿ ರಾಷ್ಟ್ರೀಯ ರೈತರ ದಿನದಂದು ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದು, ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ.
ಕರ್ನಾಟಕದ 106 ತಾಲೂಕುಗಳಲ್ಲಿ ಕೃಷಿಭಾಗ್ಯ ಯೋಜನೆ ಮರುಜಾರಿ ಮಳೆ ಕೊರತೆಯಾದರೂ ಬೆಳೆಗಳಿಗೆ ನೀರಿನ ಅಭಾವ ಎದುರಾಗಬಾರದು. ಈ ನಿಟ್ಟಿನಲ್ಲಿ 100 ಕೋಟಿ ವೆಚ್ಚದಲ್ಲಿ ಕೃಷಿಭಾಗ್ಯ ಯೋಜನೆ ಮರುಜಾರಿಗೆ ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಭೀಕರ ಬರದಿಂದ ತತ್ತರಿಸಿರುವ ನಾಡಿನ ರೈತರ ನೆರವಿಗೆ ಧಾವಿಸುವ ಉದ್ದೇಶದಿಂದ ಮೊದಲ ಕಂತಿನ ಬರಪರಿಹಾರವಾಗಿ ರೂ. 2,000 ನಮ್ಮ ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ಅನುದಾನಕ್ಕೆ ಕಾಯದೆ, ರೈತರ ಹಿತಕಾಪಾಡುವ ಏಕೈಕ ಉದ್ದೇಶದಿಂದ ತಕ್ಷಣದ ನೆರವನ್ನು ಘೋಷಿಸಲಾಗಿದೆ.
ಒಂದೂವರೆ ದಶಕಕ್ಕಿಂತ ಹೆಚ್ಚು ಕಾಲ ಸಾಗುವಳಿ ಮಾಡಿದ ಬಗರ್ ಹುಕುಂ ಭೂಮಿಯನ್ನು ಸಕ್ರಮಗೊಳಿಸಿ, ಭೂಒಡೆತನದ ಹಕ್ಕನ್ನು ರೈತರಿಗೆ ನೀಡಲಾಗುವುದು. ಪ್ರತಿಯೊಬ್ಬ ರೈತನು ಸ್ವಂತ ಭೂಮಿಯಲ್ಲಿ ಶ್ರಮದ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ. ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರದ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರಲಿದೆ ಎಂಬ ವಾಗ್ದಾನವನ್ನು ರಾಷ್ಟ್ರೀಯ ರೈತರ ದಿನದ ಸಂದರ್ಭದಲ್ಲಿ ನೀಡುತ್ತಿದ್ದೇನೆ ಎಂದಿದ್ದಾರೆ.