ಚಿತ್ರದುರ್ಗ: ಹಿಂದುಳಿದ ಮಠಗಳಲ್ಲಿ ಒಂದಾಗಿರುವ ಕೋಟೆನಾಡು ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾ ಶರಣರು ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದು, ಶ್ರೀಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ.
ಚಿತ್ರದುರ್ಗ ನಗರದ ಮುರುಘಾ ಮಠದ ಶಿರಸಂಗಿ ಮಹಾಲಿಂಗ ಸ್ವಾಮಿ ಸಭಾಂಗಣದಲ್ಲಿ ಶುಕ್ರವಾರ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರೀಮಠದ ಉತ್ತರಾಧಿಕಾರಿಯ ಹೆಸರನ್ನು ಡಾ.ಮುರುಘಾ ಶರಣರು ಘೋಷಿಸಿದರು. ನೂತನ ಉತ್ತರಾಧಿಕಾರಿ ಬಸವಾದಿತ್ಯ ಸ್ವಾಮೀಜಿ ಅವರ ಹಣೆಗೆ ಮುರುಘಾ ಶ್ರೀಗಳು ವಿಭೂತಿ ಇಟ್ಟು, ರುದ್ರಾಕ್ಷಿ ಮಾಲೆ ಹಾಕುವ ಮೂಲಕ ಹೆಸರು ಘೋಷಿಸುತ್ತಿದ್ದಂತೆ ಭಕ್ತರೆಲ್ಲರೂ ನೂತನ ಉತ್ತರಾಧಿಕಾರಿ ಶ್ರೀಗಳಿಗೆ ಹೂವಿನ ಸುರಿ ಮಳೆ ಸುರಿಸಿದರು.
ನೂತನ ಉತ್ತರಾಧಿಕಾರಿ ಘೋಷಣೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮುರುಘಾ ಶ್ರೀಗಳು, ಇದು ಆತುರದ ನಿರ್ಧಾರವಲ್ಲ. ಒಂದು ವರ್ಷದ ಹಿಂದೆಯೇ ಉತ್ತರಾಧಿಕಾರಿ ಘೋಷಣೆ ಬಗ್ಗೆ ನಿರ್ಧರಿಸಲಾಗಿತ್ತು. ಈಗಿನ ಬಸವಾದಿತ್ಯ ಸ್ವಾಮೀಜಿ ಅವರ ಪೂರ್ವಶ್ರಮದ ತಂದೆ-ತಾಯಿ ಚಿತ್ರದುರ್ಗ ಹುಲ್ಲೂರು ಗ್ರಾಮದ ಶಿವಮೂರ್ತಯ್ಯ ಮತ್ತು ಚಂದ್ರಕಲಾ. ಚಿತ್ರದುರ್ಗ ನಗರದ ಎಸ್ಜೆಎಂ ಸ್ವಾತಂತ್ರ್ಯ ಕಾಲೇಜಿನಲ್ಲಿ ಬಸವಾದಿತ್ಯ ಸ್ವಾಮಿ ವ್ಯಾಸಂಗ ಮಾಡುತ್ತಿದ್ದರು ಎಂದರು.
ಶ್ರೀ ಬಸವಾದಿತ್ಯ ಸ್ವಾಮೀಜಿ ಮಾತನಾಡಿ, ನನಗೆ ಚಿಕ್ಕ ವಯಸ್ಸಿನಲ್ಲೇ ಮಠದ ಜವಾಬ್ದಾರಿ ನೀಡಿದ್ದಾರೆ. ಶ್ರೀಮಠವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುಲಾಗುವುದು ಎಂದು ಹೇಳಿದರು.