ಬೆಂಗಳೂರು: ವಿಧಾನ ಮಂಡಲ ಅಧಿವೇಶನ ಶುಕ್ರವಾರದಿಂದ ಆರಂಭವಾಗಿದ್ದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದರು. 15ನೇ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ರಾಜ್ಯ ಸರ್ಕಾರ ರೈತರು, ಬಡವರು ದುರ್ಬಲ ವರ್ಗದವರ ಅಭಿವೃದ್ಧಿಗೆ ಬದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಾಕಿಕೊಟ್ಟ ಹಾದಿಯಲ್ಲಿ ಕ್ರಮಿಸುವ ವಿಶ್ವಾಸವಿದೆ.
ರೈತ ದೇಶದ ಬೆನ್ನೆಲುಬು, ರೈತರನ್ನು ಸದೃಢಗೊಳಿಸಲು ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ಮುಖ್ಯಮಂತ್ರಿ ರೈತ ವಿದ್ಯಾನಿಧಿಯನ್ನು ನೇಕಾರರು, ಕೃಷಿ ಕಾರ್ಮಿಕರು ಮೊದಲಾದ ವರ್ಗಗಳಿಗೆ ವಿಸ್ತರಿಸಲಾಗಿದೆ. ಅದರಂತೆ 10.79 ಲಕ್ಷ ವಿದ್ಯಾರ್ಥಿಗಳಿಗೆ 484 ಕೋಟಿ ರೂ.ಗಳನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗಿದೆ.
ರೈತಶಕ್ತಿ ಯೋಜನೆಯಡಿ ಕೃಷಿ ಯಾಂತ್ರೀಕರಣ ಪ್ರೋತ್ಸಾಹಕ್ಕೆ ಪ್ರತಿ ಎಕರೆಗೆ 250 ರೂ.ಗಳಂತೆ ಗರಿಷ್ಠ, ಐದು ಎಕರೆಗೆ ಡೀಸೆಲ್ ಸಹಾಯಧನ ನೀಡುತ್ತಿದ್ದು, ಇದಕ್ಕಾಗಿ 400 ಕೋಟಿ ರೂ. ಒದಗಿಸಲಾಗಿದೆ. 386.98 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಿಂದ 53.22 ಲಕ್ಷ ರೈತರಿಗೆ ಸಹಾಯವಾಗಿದೆ. ಅಮೃತ ರೈತ, ಮೀನುಗಾರ, ನೇಕಾರರ ಉತ್ಪಾದನೆ ಸಂಸ್ಥೆಗಳಿಗೆ 24.57 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸುಮಾರು 27,910 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ವಿಸ್ತರಿಸಲಾಗಿದೆ ಎಂದು ರಾಜ್ಯಪಾಲರು ಭಾಷಣದಲ್ಲಿ ವಿವರಿಸಿದ್ದಾರೆ.