ಬೆಂಗಳೂರು: ನರೇಂದ್ರ ಮೋದಿ ಅವರು 2014ರಲ್ಲಿ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜಕೀಯದ ಸಂಸ್ಕೃತಿಯಲ್ಲಿ ಭಾರಿ ಬದಲಾವಣೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ವೃತ್ತಿಪರರು ಮತ್ತು ಬುದ್ಧಿಜೀವಿಗಳ ಸಭೆಯನ್ನುದ್ದೇಶಿಸಿ ನಡ್ಡಾ ಮಾತನಾಡುತ್ತಿದ್ದರು.
ಕಾಂಗ್ರೆಸ್ ದೀರ್ಘಕಾಲದವರೆಗೆ ಒಡೆದು ಆಳುವ ರಾಜಕೀಯದಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದರು. ಕಾಂಗ್ರೆಸ್ ಭ್ರಷ್ಟಾಚಾರ, ಕಮಿಷನ್ ಮತ್ತು ಜಾತೀಯತೆಯನ್ನು ಪ್ರತಿನಿಧಿಸುತ್ತದೆ ಎಂದ ಅವರು, ಬಿಜೆಪಿ ಧ್ಯೇಯ, ಅಭಿವೃದ್ಧಿ ಮತ್ತು ಸಮಾಜ ಸೇವೆಗಾಗಿ ನಿಂತಿದೆ ಎಂದು ಹೇಳಿದರು. “ಮೋದಿ ಅಧಿಕಾರ ವಹಿಸಿಕೊಂಡಾಗ, ಇದು ಸರ್ಕಾರ ಅಥವಾ ಪಕ್ಷದ ಬದಲಾವಣೆ ಮಾತ್ರವಲ್ಲ, ಇದು ದೇಶದ ರಾಜಕೀಯ ಸಂಸ್ಕೃತಿಯ ಬದಲಾವಣೆಯಾಗಿದೆ” ಎಂದು ಅವರು ಪುನರುಚ್ಚರಿಸಿದರು.