ಬೆಂಗಳೂರು, ಜು. 11: ಜೆಪಿನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಯಾಗಿರುವ ಶಿರಡಿ ಸಾಯಿ ಬಾಬಾ ಲಕ್ಷ ಆಟಿಕೆಗಳಿಂದ ವಿಶೇಷ ಆಲಂಕೃತವಾಗಿ ಕಂಗೊಳಿಸುತ್ತಿದ್ದಾರೆ. ಜುಲೈ 13 ರ ಗುರುಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನ ಟ್ರಸ್ಟ್ ಖೇಲೋ ಇಂಡಿಯಾ ಥೀಮ್ನ ಆಲಂಕಾರವನ್ನು ಮಾಡಿದ್ದು, ಒಂದು ವಾರಗಳ ಕಾಲ ಈ ವಿಶೇಷ ಆಲಂಕಾರವಿರಲಿದೆ.
ಕಳೆದ ಬಾರಿ ಕೋವಿಡ್ ಇದ್ದಿದ್ದರಿಂದ ಮೂರು ಲಕ್ಷ ಮಾತ್ರೆಗಳನ್ನು ಬಳಸಿ ಆಲಂಕಾರ ಮಾಡಲಾಗಿತ್ತು. ಅದನ್ನ 1 ಲಕ್ಷ ಕುಟುಂಬಗಳಿಗೆ ಹಂಚಲಾಗಿತ್ತು. ಈ ಬಾರಿ ಮಕ್ಕಳು ಆಟ ಆಡುವಂತಹ ಸಾಮಗ್ರಿಗಳಾದ 50 ವಿವಿಧ ಸಾಮಗ್ರಿಗಳನ್ನು ಬಳಸಿ ವಿಶೇಷ ಆಲಂಕಾರವನ್ನು ಮಾಡಲಾಗುತ್ತಿದೆ. ಗೋಲಿ, ಬುಗರಿ, ಗಿಲ್ಲಿದಾಂಡು, ಕ್ಯಾಟರ್ ಪಿಲ್ಲರ್ ನಂತಹ ಸಾಂಪ್ರದಾಯಿಕ ಆಟದ ಸಾಮಗ್ರಿಗಳು, ಅಲ್ಲದೇ, ಕ್ರಿಕೆಟ್, ಟೆನ್ನೀಸ್, ಹಾಕಿ ಬ್ಯಾಟುಗಳು ಸೇರಿದಂತೆ ಹಲವಾರು ವಿಧಧ ಕ್ರೀಡಾ ಸಾಮಗ್ರಿಗಳನ್ನು ಇಲ್ಲಿ ಬಳಸಲಾಗುತ್ತಿದೆ. ಗುರುಪೂರ್ಣಿಮೆ ಮುಗಿದ ನಂತರ ಈ ಸಾಮಗ್ರಿಗಳನ್ನು ಅಗತ್ಯವಿರುವಂತವರಿಗೆ ಉಚಿತವಾಗಿ ನೀಡಲಾಗುವುದು.
ಕ್ರೀಡಾ ಸಾಮಗ್ರಿಗಳ ಅಗತ್ಯವಿರುವಂತಹ ಖಾಸಗಿ ಹಾಗೂ ಸರಕಾರಿ ಶಾಲೆಗಳು, ವಸತಿ ಸಮುಚ್ಚಯದ ಸಂಘಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಬೇಡಿಕೆಯನ್ನು ನೋಡಿಕೊಂಡು ದೇವಸ್ಥಾನ ಮಂಡಳಿಯವರು ಉಚಿತವಾಗಿ ಆಟದ ಸಾಮಗ್ರಿಗಳನ್ನು ವಿತರಿಸಲಿದ್ದಾರೆ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದ ಟ್ರಸ್ಟಿ ರಾಮ್ಮೋಹನರಾಜ್ ತಿಳಿಸಿದರು.