ಬೆಂಗಳೂರು: ಡಿಜಿಟಲ್ ಪಾವತಿ ಆ್ಯಪ್ಗಳಾದ ಫೋನ್ ಪೆ, ಗೂಗಲ್ ಪೆಗಳು ಬಳಸುವ ಯುಪಿಐ ತಂತ್ರಜ್ಞಾನವೂ ಸೇರಿದಂತೆ ಎಲ್ಲ ರೀತಿಯ ಡಿಜಿಟಲ್ ಪಾವತಿ ವ್ಯವಸ್ಥೆಗಳಿಗೆ ಶುಲ್ಕ ವಿಧಿಸುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿಟ್ಟಿರುವ ಪ್ರಸ್ತಾವಕ್ಕೆ ಕರ್ನಾಟಕದ ಚಿಂತಕ ರಾಜಾರಾಂ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ ಪುಟದಲ್ಲಿ ವಿವರವಾಗಿ ತಿಳಿಸಿರುವ ಮಾಜೀ ಹಿರಿಯ ಪತ್ರಕರ್ತ ರಾಜರಾಂ ತಲ್ಲೂರು ಅವರು, ಈ ರೀತಿ ಬರೆದುಕೊಂಡಿದ್ದಾರೆ.
ಕೊನಾಲಜಿ ಅರ್ಥ ಮಾಡಿಕೊಳ್ಳಿ!
‘ಭಾರತೀಯ ರಿಸರ್ವ್ ಬ್ಯಾಂಕ್ ಈಗ UPI ಸಹಿತ ಎಲ್ಲ ಡಿಜಿಟಲ್ ಪಾವತಿಗಳಿಗೆ ವೆಚ್ಚ ವಿಧಿಸುವ ಮಾತನ್ನಾಡುತ್ತಿದೆ. ಪಕ್ಕಾ ದಂಧೆಗೆ ಕುಳಿತವರು ಆಡಳಿತಕ್ಕೆ ಬಂದರೆ ಏನಾಗಬೇಕೋ ಅದು ಆಗತೊಡಗಿದೆ. ಜನ ಮಾತನಾಡದಿದ್ದರೆ, ನಾಳೆ ಶುದ್ಧ ಗಾಳಿ ಕೊಟ್ಟಿದ್ದಕ್ಕಾಗಿ ಪ್ರತಿ ಉಸಿರಿಗೆ ತೆರಿಗೆ ಹಾಕಲಿದ್ದಾರೆ ಇವರು. ದೇಶದಲ್ಲಿ ಬ್ಯಾಂಕುಗಳ ಖಾಸಗೀಕರಣ ಆರಂಭ ಆದಲ್ಲಿಂದ ಇಲ್ಲಿಯ ತನಕ ಯಾವಯಾವ ಲಾಜಿಕ್ ಬಳಸಿ ಜನರನ್ನುಮಂಗ ಮಾಡಲಾಯಿತು ಎಂಬುದನ್ನು ಗಮನಿಸುತ್ತಾ ಬನ್ನಿ.
ಮೊದಲಿಗೆ ಬ್ಯಾಂಕುಗಳಲ್ಲಿ ಸಿಬ್ಬಂದಿ ಜಾಸ್ತಿ, ಕೆಲಸ ಕಡಿಮೆ ಆಗ್ತಿದೆ, ಲಾಭ ಇಲ್ಲ, ಸ್ಟ್ರೈಕ್ ಮಾಡ್ತಾರೆ ಅಂತ ಹೇಳಿ ಕೆಲಸದ ಎಫೀಷಿಯನ್ಸಿ ಹೆಸರಲ್ಲಿ ಕಂಪ್ಯೂಟರೀಕರಣ ಬಂತು. ಸಿಬ್ಬಂದಿ ಕಡಿಮೆ ಆಯಿತು. ಆ ಬಳಿಕ ಖಾಸಗಿ ಬ್ಯಾಂಕುಗಳಿಗೆ ಅವಕಾಶ ಮಾಡಿಕೊಡಲಾಯಿತು. ಅಲ್ಲಿ ಲಾಭ ಗಳಿಕೆಯ ಹೆಸರಲ್ಲಿ, ಜನಸಾಮಾನ್ಯರನ್ನು ಬ್ಯಾಂಕುಗಳಿಂದ ದೂರ ಅಟ್ಟಲಾಯಿತು. ಬ್ಯಾಂಕುಗಳನ್ನು ದೊಡ್ಡದಾಗಿಸಲು, ಎಫೀಷಿಯಂಟ್ ಮಾಡಲು ಒಂದರೊಳಗಿನ್ನೊಂದು ವಿಲೀನಗೊಳಿಸಲಾಯಿತು.
ಬ್ಯಾಂಕುಗಳಲ್ಲಿ ಕ್ಷಿಪ್ರ ವ್ಯವಹಾರ, ಸಿಬ್ಬಂದಿ ಕಡಿಮೆ ಮಾಡಿ ಇನ್ನಷ್ಟು ಲಾಭ ಎಂದು ಹೇಳಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಆಯಿತು. ಜನ ಬ್ಯಾಂಕಿಗೆ ಬಂದರೆ ಖರ್ಚು ಜಾಸ್ತಿ ಎಂದು ಹೇಳಿ ATM, ಡಿಜಿಟಲ್ ಪಾವತಿ (RTGS, IMPS ಇತ್ಯಾದಿ) ಬಂದವು. ಮನೆ ಬಾಗಿಲಿಗೇ ಬ್ಯಾಂಕ್ ಬಂದಿದೆ ಎಂದು ಬೂಸಿ ಬಿಡಲಾಯಿತು. ಡಿಜಿಟಲ್ ಇಂಡಿಯಾದಲ್ಲಿ UPI ಆಯಿತು; ಜನ ನಗದು ಚಲಾವಣೆ ಮಾಡಲಿಕ್ಕಿಲ್ಲ, ನೋಟು ಪ್ರಿಂಟ್ ಮಾಡಿದರೆ ಖರ್ಚು ಜಾಸ್ತಿ, ಕಾಳಧನ ಹೆಚ್ಚಾಗ್ತದೆ ಎಂದೆಲ್ಲ ಹೇಳಿ ಮೊಬೈಲ್ ಬ್ಯಾಂಕಿಂಗ್ ಚಾಲ್ತಿಗೆ ಬಂತು.
ಈಗ ಎಲ್ಲ ಮುಗಿದ ಮೇಲೆ UPI ಪಾವತಿಗೂ ವೆಚ್ಚ ವಿಧಿಸುವ ಮಾತು ಆಡಲಾಗುತ್ತಿದೆ. ಅಂದರೆ ಶೀಘ್ರವೇ ನೀವು ಪಾವತಿಸುವ ಗೂಗಲ್ ಪೇ, ಫೋನ್ ಪೇ, ಪೇಟಿಯೆಂ ಇತ್ಯಾದಿಗಳಿಗೂ ಪ್ರತೀ ಪಾವತಿಗೆ “ವೆಚ್ಚ” ತೆರಬೇಕಾಗಲಿದೆ. ಮೊದಲಿಗೆ ದೊಡ್ಡ ಮೊತ್ತಕ್ಕೆ ಮಾತ್ರ ವೆಚ್ಚ ಎಂದು ಹೇಳಿ, ಮುಂದೆ ಮೂರು ಬಜೆಟ್ ಮುಗಿಯುವಾಗ ಅಂಗಡಿಯಲ್ಲಿ ನೀವು ಪಾವತಿ ಮಾಡುವ ಹದಿನೈದು ಇಪ್ಪತ್ತು ರೂಪಾಯಿಗೂ ವೆಚ್ಚ ಬರಬಹುದು!
ಸ್ವಾಮೀ, ದೇಶ ನಡೆಸುವ ತಜ್ಞರೇ ಒಂದು ಮಾತು ಹೇಳಿ ಮುಂದುವರಿಯಿರಿ: ಸಾಂಪ್ರದಾಯಿಕ ಬ್ಯಾಂಕಿಂಗ್ನಿಂದ ಬರುವ ಆದಾಯ ಬರುತ್ತಿದ್ದರೂ (ಅಂದರೆ ಸಾಲದ ಬಡ್ಡಿ, ಠೇವಣಿಯ ಮರು ಹೂಡಿಕೆ, ಬ್ಯಾಂಕಿಂಗ್ ಸೇವೆಗಳಿಗೆ ವಿಧಿಸುವ ವೆಚ್ಚ) ಇಲ್ಲಿಯ ತನಕ ಇಷ್ಟೆಲ್ಲ ವೆಚ್ಚ ಕಡಿತ ಪ್ರಯತ್ನ ಮಾಡಿ ಕೂಡ ನಿಮ್ಮ ಹೊಟ್ಟೆ ತುಂಬಿಲ್ಲ ಯಾಕೆ? ಈಗ ಜನ ತಮ್ಮ ಕಿಸೆಯಲ್ಲಿಟ್ಟುಯ್ಕೊಂಡು ತಿರುಗುವ ದುಡ್ಡನ್ನೂ ಡಿಜಿಟಲ್ ಮಾಡಿ, ಅದರಲ್ಲೂ ಪಾಲಿಗೆ ಬರುತ್ತಿದ್ದೀರಲ್ಲಾ ಉದ್ದೇಶ ಏನು?
ಜನ ಈ ಪ್ರಶ್ನೆಗಳನ್ನು ಕೇಳದಿದ್ದರೆ ಮುಂದಿನ ದಿನಗಳು ಬಹಳ ಕಷ್ಟ ಇವೆ. ಈಗ ರಿಸರ್ವ್ ಬ್ಯಾಂಕಿಗೆ ಜನ ಅಕ್ಟೋಬರ್ ಮೂರರ ಒಳಗೆ ತಮ್ಮ ಅಭಿಪ್ರಾಯ ಹೇಳಬೇಕಂತೆ. ಬಾಯಿಬಿಟ್ಟು ಮಾತನಾಡಿ. ಅದಕ್ಕಾಗಿ ಅಭಿಯಾನವನ್ನೇ ನಡೆಸಿ. ಇಲ್ಲದಿದ್ದರೆ, ಬಾಯಿ ಮುಚ್ಚಿಕೊಂಡು ಕಿಸೆಗೆ ಕತ್ತರಿ ಹಾಕಿಸಿಕೊಂಡು ತೆಪ್ಪಗಿರಿ. ಆಯ್ಕೆ ನಿಮ್ಮದು’ ಎಂದು ರಾಜಾರಾಂ ತಲ್ಲೂರು ತಮ್ಮ ಪೋಸ್ಟ್ ಮುಗಿಸಿದ್ದಾರೆ. ರಿಸರ್ವ್ ಬ್ಯಾಂಕ್ ಕೊಟ್ಟಿರುವ ವಿವರಗಳನ್ನೂ ಕೊಟ್ಟಿದ್ದಾರೆ.
ರಿಸರ್ವ್ ಬ್ಯಾಂಕ್ ನೀಡಿರುವ ವಿವರಣೆಗಳು ಇಲ್ಲಿವೆ:
https://www.rbi.org.in/Scripts/PublicationsView.aspx?id=21082
#RBI