ಬೆಂಗಳೂರು: ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ಅರಿವನ್ನುಂಟು ಮಾಡಿ ಉಚಿತ ಕಾನೂನು ನೆರವು ಮತ್ತು ಸಲಹೆಯನ್ನು ನೀಡುವುದು ಹಾಗೂ ಲೋಕ್ ಅದಾಲತ್ ಮೂಲಕ ನ್ಯಾಯಾಲಯಗಳಲ್ಲಿ ಅಥವಾ ಇತರ ಕಛೇರಿಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ ಸಂಬಂಧ ಆ.13ರಂದು ರಂದು ರಾಷ್ಟ್ರೀಯ ಲೋಕ್ ಅದಾಲತನ್ನು ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಇ-ಲೋಕ್ ಅದಾಲತ್, ಮೆಗಾ ಲೋಕ್ ಅದಾಲತ್ ಆಯೋಜಿಸಲಾಗುತ್ತಿದ್ದು. ಸಾರ್ವಜನಿಕರು ತಮ್ಮ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತಕ್ಷಣ ಪರಿಹಾರ ಪಡೆದುಕೊಂಡು ಪ್ರಕರಣಗಳನ್ನು ಇತ್ಯರ್ಥಪಡಿಸಬಹುದಾಗಿದೆ.
ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಅರಿವನ್ನು ಉಂಟು ಮಾಡಲು ರಾಜ್ಯ ಮಟ್ಟದಿಂದ ಗ್ರಾಮ ಮಟ್ಟದವರೆಗೆ ಹಲವಾರು ಕಾನೂನು ಕಾರ್ಯಕ್ರಮಗಳನ್ನು, ಕಾನೂನು ಕಾರ್ಯಾಗಾರಗಳನ್ನು, ಕಾನೂನು ಅರಿವು ಶಿಬಿರಗಳ ಮೂಲಕ ಹಲವಾರು ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಸದರಿ ಕಾರ್ಯಕ್ರಮಗಳಲ್ಲಿ ನ್ಯಾಯಾಧೀಶರು, ನುರಿತ ವಕೀಲರು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುವದರಿಂದ ಸಾರ್ವಜನಿಕ ಉಪಯುಕ್ತವಾದ ಮಾಹಿತಿ ಸಿಗುವುದಲ್ಲದೇ ಅವರ ಕಾನೂನು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಕರ್ನಾಟಕ ರಾಜ್ಯದಲ್ಲಿ 3ನೇ ಲೋಕ್ ಅದಾಲತನ್ನು ಆ.13 ರಂದು ಏರ್ಪಡಿಸಿದ್ದು, ಸದರಿ ಲೋಕ್ ಅದಾಲತ್ ನಲ್ಲಿ, ಮೋಟಾರು ವಾಹನ ಹಾಗೂ ಅಮಲ್ದಾರಿ ಪ್ರಕರಣಗಳು, ಪಾರ್ಟಿಷಿಯನ್ ಪ್ರಕರಣಗಳು, ಇತರ ಸಿವಿಲ್ ವ್ಯಾಜ್ಯಗಳು, ಎಜೆಕ್ಟ್ ಮೆಂಟ್, ಹೆಚ್ ಆರ್ ಸಿ ಪ್ರಕರಣಗಳು, ಎಂ.ಎಂ.ಆರ್.ಡಿ ಪ್ರಕರಣಗಳು, ಭೂಸ್ವಾಧೀನ ಅಮಲ್ಜಾರಿ ಪ್ರಕರಣಗಳು, ಎನ್.ಐ.ಆಕ್ಟ್ ಪ್ರಕರಣಗಳು, ಕ್ರಿಮಿನಲ್ ಕಂಪೌಂಡೇಬಲ್ ಪ್ರಕರಣಗಳು, ವಾಣಿಜ್ಯ ಪ್ರಕರಣಗಳು ಮತ್ತು ರಾಜಿಯಾಗಬಹುದಾದ ವೈವಾಹಿಕ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಲೋಕ್ ಅದಾಲತ್ ನಲ್ಲಿ ಇತ್ಯರ್ಥಗೊಳ್ಳಲು ಅರ್ಹವಾಗಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದಕ್ಕಾಗಿ ನಿರ್ದಿಷ್ಟ ಪ್ರವರ್ತನ ಪ್ರಕ್ರಿಯೆಯನ್ನು (ಎಸ್.ಓ.ಪಿ ಅಂದರೆ ಸ್ಟ್ಯಾಂಡರ್ಡ್ ಅಪರೇಂಟಿಂಗ್ ಪ್ರೊಸೀಜರ್) ಹೊರತಂದಿರುತ್ತದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಕಾರ್ಯನಿರ್ವಾಹಕ ಅಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ಬಗ್ಗೆ ಈಗಾಗಲೇ ಕಾನೂನು ಕಾರ್ಯದರ್ಶಿ, ಇನ್ಸೂರೆನ್ಸ್ ಕಂಪನಿಯ ಅಧಿಕಾರಿಗಳೊಂದಿಗೆ, ಕಂದಾಯ ಇಲಾಖೆ, ಹಣಕಾಸು ಇಲಾಖೆ, ಪೊಲೀಸ್ ಇಲಾಖೆ, ಜಲ ಸಂಪನ್ಮೂಲ ಇಲಾಖೆ ಹಾಗೂ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ, ರೇರಾ ಅಧಿಕಾರಿಗಳೊಂದಿಗೆ ಹಾಗೂ ರಾಜ್ಯದಲ್ಲಿನ ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಯವರೊಂದಿಗೆ ಸಭೆಗಳನ್ನು ನಡೆಸಲಾಗಿರುತ್ತದೆ.
ದಿನಾಂಕ: 01.07.2022 ರಂದು ಕರ್ನಾಟಕ ರಾಜ್ಯದಲ್ಲಿ ಒಟ್ಟು ಬಾಕಿ ಉಳಿದಿರುವ ಪ್ರಕರಣಗಳು 21,06,089, ಅವುಗಳಲ್ಲಿ ಇಲ್ಲಿಯವರೆಗೆ ಒಟ್ಟು 3,23,294 ಪ್ರಕರಣಗಳನ್ನು ದಿನಾಂಕ: 13.08.2022 ರಂದು ನಡೆಯಲಿರುವ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಲೋಕ್ ಅದಾಲತ್ ಕಾರ್ಯಕ್ರಮವು ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಅತಿ ಶೀಘ್ರವಾಗಿ ಪರಿಹಾರ ಪಡೆದುಕೊಳ್ಳಲು ಇರುವ ವೇದಿಕೆಯಾಗಿದ್ದು, ಸಾರ್ವಜನಿಕರಿಗೆ ಇದು ಒಂದು ಸುವರ್ಣ ಅವಕಾಶವಾಗಿದೆ.