ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲು ಪರದಾಡುತ್ತಿರುವ ಸರ್ಕಾರ ಇದೀಗ ರಾಜ್ಯದ ಮಾಧ್ಯಮ ಸಂಸ್ಥೆಗಳಿಗೆ ಸರ್ಕಾರ ಹಣ ಬಾಕಿ ಇರಿಸಿಕೊಂಡಿರುವ ಮಾಹಿತಿ ಬಹಿರಂಗವಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿಯೇ ರಾಜ್ಯದ ವಿವಿಧ ಪತ್ರಿಕೆಗಳು ಹಾಗೂ ಸುದ್ದಿವಾಹಿನಿಗಳಿಗೆ ಸರ್ಕಾರ ಬರೋಬ್ಬರಿ 140 ಕೋಟಿ ರೂಪಾಯಿ ಹಣವನ್ನು ಬಾಕಿ ಇರಿಸಿಕೊಂಡಿದೆ. ಈ ಹಣವನ್ನು ಬಿಡುಗಡೆ ಮಾಡುವಂತೆ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಸಿಎಂ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಸಿಎಂಗೆ ಬರೆದಿರುವ ಪತ್ರದಲ್ಲಿ , ‘ಜಿಲ್ಲಾ, ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳು, ಸುದ್ದಿವಾಹಿನಿಗಳಿಗೆ ನೀಡಲಾಗಿರುವ ಜಾಹೀರಾತು ಬಾಬ್ತು ಬಾಕಿ 140 ಕೋಟಿ ರೂಪಾಯಿ ಆಗಿದೆ. ಇಷ್ಟು ಬೃಹತ್ ಮೊತ್ತದ ಬಾಕಿಯಿಂದಾಗಿ ಮಾಧ್ಯಮ ಸಂಸ್ಥೆಗಳು ತುಂಬಾ ಸಂಕಷ್ಟಕ್ಕೆ ಸಿಲುಕಿವೆ ಎಂದು ಸಂಪಾದಕರು, ಪತ್ರಕರ್ತರ ಸಂಘಟನೆಗಳು ನನ್ನ ಬಳಿ ನಿವೇದಿಸಿಕೊಂಡಿವೆ. ಅಂತೆಯೇ ಆದಷ್ಟು ಜರೂರಾಗಿ ಜಾಹೀರಾತು ಬಾಬ್ತು ಬಾಕಿ ಮೊತ್ತ 140 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿಸಿಕೊಟ್ಟು ಮಾಧ್ಯಮ ಸಂಸ್ಥೆಗಳು ನೆರವಿಗೆ ನಿಲ್ಲುವಂತೆಯೂ ಸಂಘಟನೆಗಳು ಮನವಿ ಮಾಡಿರುತ್ತವೆ. ಆದ್ದರಿಂದ ವಾರ್ತಾ ಇಲಾಖೆಗೆ ಶೀಘ್ರವೇ 140 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಮಾಧ್ಯಮ ಸಂಸ್ಥೆಗಳ ನೆರವಿಗೆ ನಿಲ್ಲಬೇಕೆಂದು ಕೋರಿದೆ’ ಎಂದು ಎನ್ ಚೆಲುವರಾಯಸ್ವಾಮಿ ಅಧಿಕೃತ ಲೆಟರ್ಹೆಡ್ನಿಂದ ಸಿಎಂಗೆ ಪತ್ರ ಬರೆದಿದ್ದಾರೆ