ಬೆಂಗಳೂರು: ಎಂಟು ವರ್ಷದ ಮಗು ತನ್ನನ್ನು ಡೆಲಿವರಿ ಬಾಯ್ ತನ್ನನ್ನು ಅಪಹರಿಸಿದ್ದಾನೆ ಎಂದು ಹೇಳಿದ್ದು, ಇದರಿಂದ ಕುಪಿತಗೊಂಡ ಜನರು ಡೆಲಿವರಿ ಬಾಯ್ಗೆ ಥಳಿಸಿದ್ದಾರೆ. ಆದರೆ ತನಿಖೆಯಲ್ಲಿ ಅಪಹರಣ ಪ್ರಕರಣ ಸುಳ್ಳು ಎಂಬುದು ಸಾಬೀತಾಗಿದೆ.
ಜುಲೈ 12 ರಂದು ಎಲೆಕ್ಟ್ರಾನಿಕ್ಸ್ ಸಿಟಿ ಪ್ರದೇಶದ ನೀಲಾದ್ರಿ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಡೆಲಿವರಿ ಬಾಯ್ ಅಖಿಲ್ ನೀಡಿರುವ ದೂರು ಆಧರಿಸಿ ಎನ್.ಸಿ.ಟ (ಗಂಭೀರವಲ್ಲದ ಪ್ರಕರಣ) ದಾಖಲಿಸಲಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹೇಳಿದರು.
‘ಎಂಟು ವರ್ಷದ ಬಾಲಕಿ, ತಂದೆ ತಾಯಿ ಹಾಗೂ ತಮ್ಮನ ಜೊತೆ ಅಪಾರ್ಟ್ ಮೆಂಟ್ ಸಮುಚ್ಚಯದ ವಾಸವಾಗಿದ್ದಾಳೆ. ಜೂನ್ 12ರಂದು ಪೋಷಕರು, ಬಾಲಕಿಯ ತಮ್ಮನನ್ನು ಶಾಲೆಗೆ ಬಿಡಲು ಹೋಗಿದ್ದರು. ಈ ವೇಳೆ ಬಾಲಕಿ ಮನೆಯಲ್ಲಿದ್ದಳು. ಹೊರಗಡೆ ಹೋಗದಂತೆ ಪೋಷಕರು ಬಾಲಕಿಗೆ ತಾಕೀತು ಮಾಡಿದ್ದರು. ಮಾತು ಕೇಳದ ಬಾಲಕಿ ಪೋಷಕರು ಹೊರಗೆ ಹೋಗುತ್ತಿದ್ದಂತೆ ಮನೆಯಿಂದ ಹೊರಬಂದು ಅಪಾರ್ಟ್ ಮೆಂಟ್ ಸಮುಚ್ಚಯದ ಹಲವೆಡೆ ಸುತ್ತಾಡುತ್ತಿದ್ದಳು. ‘ಕೆಲ ಹೊತ್ತಿನ ನಂತರ ಪೋಷಕರು ಮನೆಗೆ ವಾಪಸು ಬಂದಿದ್ದರು. ಮನೆಯಲ್ಲಿ ಬಾಲಕಿ ಇರಲಿಲ್ಲ. ಹುಡುಕಾಟದ ಬಳಿಕ ಬಾಲಕಿ ಮೆಟ್ಟಿಲು ಬಳಿ ಬಾಲಕಿ ಪತ್ತೆಯಾಗಿದ್ದಳು. ಅದೇ ಜಾಗದಲ್ಲಿ ಡೆಲಿವರಿ ಬಾಯ್ ಅಖಿಲ್ ಆಹಾರ ವಸ್ತು ಡೆಲಿವರಿಗಾಗಿ ಹೊರಟಿದ್ದರು. ಈ ವೇಳೆ ಮನೆ ಬಿಟ್ಟು ಎಲ್ಲಿಗೆ ಹೋಗಿದ್ದು, ಎಂದು ಬಾಲಕಿಯನ್ನು ಪೋಷಕರು ಗದರಿಸಿದ್ದರು. ಈ ವೇಳೆ ಅಖಿಲ್ ತನ್ನನ್ನು ಅಪಹರಿಸಿದ್ದ ಎಂದು ಬಾಲಕಿ ಆತನನ್ನು ತೋರಿಸಿದ್ದಳು. ಅದನ್ನು ನಂಬಿದ ಅಪಾರ್ಟ್ ಮೆಂಟ್ ನಿವಾಸಿಗಳು ಮತ್ತು ಪೋಷಕರು ಅಖಿಲ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಪೊಲೀಸರು ವಿಚಾರಣೆ ವೇಳೆ ಅಪಾರ್ಟ್ಮೆಂಟ್ ಸಮುಚ್ಚಯ ಹಾಗೂ ಅಕ್ಕ ಪಕ್ಕದ ಸಿ.ಸಿ.ಟಿ.ವಿ, ಕ್ಯಾಮರಾ ದೃಶ್ಯ ಪರಿಶೀಲಿಸಿದರು. ಈ ವೇಳೆ ಡೆಲಿವರಿ ಬಾಯ್ ಅಮಾಯಕ ಎಂಬುದು ತಿಳಿಯಿತು. ದೃಶ್ಯ ಆಧರಿಸಿ ವಿಚಾರಣೆ ನಡೆಸಿದಾಗ, ಬಾಲಕಿ ಸುಳ್ಳು ಹೇಳಿದ್ದು ಗೊತ್ತಾಯಿತು’ ಎಂದು ಪೊಲೀಸರು ಹೇಳಿದರು.