ಬೆಂಗಳೂರು: ಗುಜರಾತ್ ಹಾಲು ಒಕ್ಕೂಟದ ಅಮುಲ್ ಪ್ರವೇಶದಿಂದ ಕರ್ನಾಟಕ ಹಾಲು ಒಕ್ಕೂಟದ ಬ್ರಾಂಡ್ ನಂದಿನಿಗೆ ಅಪಾಯ ಎದುರಾಗಲಿದೆ ಎಂಬ ಆತಂಕ ಕನ್ನಡಿಗರಲ್ಲಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಹೋರಾಟದ ಮೂಲಕ ಕನ್ನಡಿಗರು ಪ್ರತಿಭಟನೆ ಹಾದಿಗೆ ಇಳಿದಿದ್ದಾರೆ. ಕೆಂಗೇರಿಯಿಂದ ವೈಟ್ಫೀಲ್ಡ್ಗೆ, ತಾಜಾತನದ ಹೊಸ ಅನುಭವ ಎಂಬಂತಹ ಜಾಹೀರಾತುಗಳು, ಡಿಜಿಟಲ್ ಬ್ಯಾನರ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಗುಜರಾತ್ ಮೂಲದ ಅಮೂಲ್ ಮಾಡುತ್ತಿರುವ ಈ ಪ್ರಮೋಶನ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. #GoBackAmul, #SaveNandini ಟ್ಯಾಗ್ಗಳು ಟ್ವಿಟರ್ನಲ್ಲಿ ಹರಿದಾಡುತ್ತಿವೆ.
ಮಂಡ್ಯದ ಸಾರ್ವಜನಿಕ ಸಭೆಯಲ್ಲಿ ಅಮುಲ್ ಮತ್ತು ನಂದಿನಿ ನಡುವಿನ ವಿಲೀನಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಒತ್ತಾಯಿಸಿದ್ದರು. ಆ ನಂತರ ನಡೆಯುತ್ತಿರುವ ಈ ಬೆಳವಣಿಗೆಗಳು ರಾಜ್ಯದ ರೈತರ ಭವಿಷ್ಯಕ್ಕೆ ಕುತ್ತು ತಂದಿವೆ ಎಂಬ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬಂದಿವೆ.
ಅಲ್ಲದೆ ಈ ವಿಚಾರ ವಿರೋಧ ಪಕ್ಷಗಳ ನಾಯಕರು ಮತ್ತು ಕನ್ನಡ ಪರ ಸಂಘಟನೆಗಳನ್ನು ಆಕ್ರೋಶಕ್ಕೆ ಕಾರಣವಾಗಿವೆ. ಅಮುಲ್ ಮತ್ತು ನಂದಿನಿ ಸಂಘರ್ಷದಲ್ಲಿ ನಮ್ಮ ರಾಜ್ಯದ ಬ್ರ್ಯಾಂಡ್ ಸೋಲುತ್ತಿದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ನಂದಿನಿ ಬ್ರ್ಯಾಂಡ್ ಉತ್ತೇಜನಕ್ಕೆ ಸಂಸ್ಥೆ ಮುಂದಾಗಿಲ್ಲ ಎಂದು ಹಲವರು ಆರೋಪಿಸಿದ್ದಾರೆ.
ಅಮುಲ್ಗಿಂತ ಉತ್ತಮ ಗುಣಮಟ್ಟದ ಹಾಲನ್ನು ಹೊಂದಿದ್ದರೂ ನಂದಿನಿ ಬ್ರಾಂಡ್ನ ಮಾರುಕಟ್ಟೆ ಮತ್ತು ಪ್ರಚಾರದಲ್ಲಿ ಹಿಂದಿದ್ದೇವೆ. ಅಮುಲ್ ಹಾಲಿನ ಬಳಕೆಯು ಕೇವಲ ಶೇ.10 ರಷ್ಟಿದ್ದರೂ ಅವರ ಜಾಹೀರಾತು ಶೇ.90ರಷ್ಟಿದೆ. ಇದರಿಂದ ರಾಜ್ಯದ ಹೈನುಗಾರರು ತೊಂದರೆಗೆ ಸಿಲುಕಲಿದ್ದಾರೆ ಎಂಬ ವಾದ ಕೇಳಿಬಂದಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮ ಬ್ಯಾಂಕುಗಳನ್ನು ನಾಶಪಡಿಸಿದ ನಂತರ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಕೆಎಂಎಫ್ ಅನ್ನು ನಾಶಮಾಡಲು ನಿರ್ಧರಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಈ ಬಗ್ಗೆ ಧ್ವನಿ ಎತ್ತಿದ್ದು, ನಮ್ಮ ಮಣ್ಣಿನ ಸಂಸ್ಥೆ ನಂದಿನಿ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.