ಬೆಂಗಳೂರು: ಕೇಂದ್ರದ ಬಜೆಟ್ ನಿರಾಶದಾಯಕ, ಇದು ಎಲೆಕ್ಷನ್ ಬಜೆಟ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಚರ್ಚೆ ಮಾಡುವಂತಹ ಬಜೆಟ್ ಅಲ್ಲ. 47 ಲಕ್ಷದ 65 ಸಾವಿರ 768 ಕೋಟಿ ರೂ. ಗಾತ್ರ ಬಜೆಟ್ ಆಗಿದೆ. ಕಳೆದ ವರ್ಷ 45 ಲಕ್ಷದ 3 ಸಾವಿರ 97 ಕೋಟಿ 2 ಲಕ್ಷದ 66 ಸಾವಿರ ಕೋಟಿ ರೂ. ಹೆಚ್ಚು ಈಗಿನ ಮಧ್ಯಂತರ ಬಜೆಟ್ ಘೋಷಣೆ ಆಗದಿರಬಹುದು. ಅಂದರೆ ಕಳೆದ ಬಾರಿಗಿಂತ ಈ ವರ್ಷ 5.8% ಹೆಚ್ಚಳವಾಗಿದೆ ಎಂದರು.
ಈ ಬಜೆಟ್ ನಿರಾಶಾದಾಯಕವಾಗಿದ್ದು, ಚುನಾವಣೆಗೋಸ್ಕರ ಮಾಡಿದ್ದಾರೆ. ಯಾವುದೇ ಹೊಸ ಅಂಶ ಇಲ್ಲ. ಬಜೆಟ್ ವಿಶ್ಲೇಷಣೆ ಮಾಡುವುದು ಕಷ್ಟ. ಬಡವರು, ರೈತರು, ಯುವಕರು ಮತ್ತು ಮಹಿಳೆಯರಿಗಾಗಿ ಈ ಬಜೆಟ್ ಅಂತಾರೆ, ಇದು ವಿನಾಶಕಾರಿ ಬಜೆಟ್ ಅಂತ ನಾನು ಹೇಳುತ್ತೇನೆ. ನಾವು ನಿಜವಾಗಿಯೂ ಬಡವರು, ರೈತರು, ಯುವಕರು ಮತ್ತು ಮಹಿಳೆಯರಿಗಾಗಿ ಕಾರ್ಯಕ್ರಮ ಕೊಟ್ಟಿದ್ದೇವೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಗೃಹಜ್ಯೋತಿ ಕೃಷಿಭಾಗ್ಯ ಭಾಗ್ಯಗಳನ್ನ ಕೊಟ್ಟಿದ್ದೇವೆ. ಕಳೆದ 45 ವರ್ಷಗಳಲ್ಲಿ ಬಹಳ ನಿರುದ್ಯೋಗ ಬೆಳೆದಿದೆ ಎಂದರು.