ಬೆಂಗಳೂರು: ಆರೆಸ್ಸೆಸ್, ಎಬಿವಿಪಿ, ಬಿಜೆಪಿ ಮುಖಂಡ, ಸಮಾಜ ಸೇವಕ ಹಾಗೂ ಹಿಂದುಳಿದ ವರ್ಗಗಳ ಯುವನಾಯಕ ಎಂ. ದೊಡ್ಡಯ್ಯ ಆನೇಕಲ್ರವರು ಆಮ್ ಆದ್ಮಿ ಪಾರ್ಟಿಗೆ ಶುಕ್ರವಾರ ಇಂದಿಲ್ಲಿ ಸೇರ್ಪಡೆಯಾದರು. ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ, ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ರವರು ದೊಡ್ಡಯ್ಯ ಆನೇಕಲ್ರವರನ್ನು ಬರಮಾಡಿಕೊಂಡರು.
ಬೆಂಗಳೂರಿನ ಪ್ರೆಸ್ಕ್ಲಬ್ ಸ್ಪೋರ್ಟ್ಸ್ ಹಾಲ್ನಲ್ಲಿ ನಡೆದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ಶಾಲಾ ದಿನಗಳಿಂದ ಆರೆಸ್ಸೆಸ್ ಸ್ವಯಂಸೇವಕರಾಗಿದ್ದ ದೊಡ್ಡಯ್ಯ ಆನೇಕಲ್ರವರು ಎಬಿವಿಪಿಯ ತಾಲೂಕು ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಸಿಇಟಿ ಪ್ರಾಧಿಕಾರ ರಚಿಸುವ ಹೋರಾಟ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಪರ ದನಿ ಎತ್ತಿದ್ದಾರೆ. ನಂತರ ಬಿಜೆಪಿಯ ಆನೇಕಲ್ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಆನೇಕಲ್ ತಾಲೂಕು ಕಾರ್ಯದರ್ಶಿಯಾಗಿ, ಬೆಂಗಳೂರು ಜಿಲ್ಲಾ ಕಾರ್ಯದರ್ಶಿಯಾಗಿ, ರಾಜ್ಯ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸ್ವಾಮಿ ವಿವೇಕಾನಂದ ಯುವಸೇನೆ ಎಂಬ ಸಂಘಟನೆ ಆರಂಭಿಸಿ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ತಿಳಿಸಿದರು.
“ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನ ರಾಜ್ಯ ಯು ಘಟಕದ ಅಧ್ಯಕ್ಷರಾಗಿ ಹಾಗೂ ಕುರುಬೆ ಎಸ್ಟಿ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ದೊಡ್ಡಯ್ಯ ಆನೇಕಲ್ರವರು ಸೇವೆ ಸಲ್ಲಿಸಿದ್ದಾರೆ.
ವಿಶೇಷವಾಗಿ ಕುರುಬ ಸಮುದಾಯ ಸೇರಿದಂತೆ ರಾಜ್ಯದ ಹಿಂದುಳಿದ ವರ್ಗಗಳ ಯುವ ಸಮೂಹದೊಂದಿಗೆ ಉತ್ತಮ ಬಾಂಧ್ಯವ್ಯ ಹೊಂದಿರುವ ದೊಡ್ಡಯ್ಯ ಆನೇಕಲ್ರವರು ಆಮ್ ಆದ್ಮಿ ಪಾರ್ಟಿ ಸೇರಿರುವುದು ಪಕ್ಷದ ಬಲ ಹೆಚ್ಚಿಸಿದೆ. ಇಂತಹ ಅನೇಕ ನಾಯಕರು ಹಾಗೂ ಜನಸಾಮಾನ್ಯರ ಸಹಕಾರದೊಂದಿಗೆ ಆಮ್ ಆದ್ಮಿ ಪಾರ್ಟಿಯು ಮುಂದಿನ ಚುನಾವಣೆಗಳಲ್ಲಿ ಜಯ ಗಳಿಸಲಿದೆ” ಎಂದು ಪೃಥ್ವಿ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಎಎಪಿ ಸೇರಿದ ಎಂ.ದೊಡ್ಡಯ್ಯ ಆನೇಕಲ್ ಮಾತನಾಡಿ, “ದೇಶಕ್ಕೆ ಆಮ್ ಆದ್ಮಿ ಪಾರ್ಟಿಯೊಂದೇ ಆಶಾಕಿರಣವಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷವನ್ನು ಬೆಂಬಲಿಸಿ ಶೀಘ್ರವೇ ಕರ್ನಾಟಕದಲ್ಲಿ ಅಧಿಕಾರ ತರಬೇಕಿದೆ. ಇಲ್ಲದಿದ್ದರೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ನಂತಹ ಭ್ರಷ್ಟ ಪಕ್ಷಗಳು ದೇಶವನ್ನು ಅಧೋಗತಿಗೆ ತೆಗೆದುಕೊಂಡು ಹೋಗುವ ಅಪಾಯವಿದೆ. ದೆಹಲಿ ಹಾಗೂ ಪಂಜಾಬ್ನಲ್ಲಿ ಎಎಪಿ ಸರ್ಕಾರಗಳು ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಕುರಿತು ಕರ್ನಾಟಕದ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ನಾವೆಲ್ಲ ಮಾಡಬೇಕಿದೆ” ಎಂದು ಹೇಳಿದರು.
ಮುಂಬರುವ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡಯ್ಯ ನವರು ಗದಗ ಜಿಲ್ಲೆಯ ರೋಣ ಮತಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಹಲವು ವರ್ಷಗಳಿಂದ ರೋಣ ಮತದಾರರ ಮನಸ್ಸನ್ನು ತಮ್ಮ ಹಲವು ಸೇವಾ ಚಟುವಟಿಕೆಗಳಿಂದ ಗೆದ್ದಿದ್ದಾರೆ. ಇವರ ಗೆಲುವು ನಿಚ್ಚಳ ಎಂದು ಹಲವು ಮತ ಸಮೀಕ್ಷೆಗಳು ಹೇಳುತ್ತಿವೆ.
ದೊಡ್ಡಯ್ಯ ಆನೇಕಲ್ರವರ ಇನ್ನೂರಕ್ಕೂ ಹೆಚ್ಚು ಬೆಂಬಲಿಗರು ಇದೇ ವೇಳೆ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.