ಬೆಂಗಳೂರು: ಕುಟುಂಬ ಪ್ರಧಾನ ಪಕ್ಷವೆಂದು ಕಾಂಗ್ರೆಸ್, ಜೆಡಿಎಸ್ ಅನ್ನು ಹೀಯಾಳಿಸುತ್ತಿದ್ದ ಬಿಜೆಪಿ ನಾಯಕರಿಗೆ ಟಿಕೇಟ್ ಪಡೆಯಲು ಅದೇ ವಿಚಾರ ಮುಳುವಾಗಿದೆ. ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಹಲವು ಘಟಾನುಘಟಿ ನಾಯಕರ ಮಕ್ಕಳಿಗೆ ಟಿಕೇಟ್ ನೀಡಲು ಬಿಜೆಪಿ ಹೈಕಮಾಂಡ್ ಅಸಮ್ಮತಿ ವ್ಯಕ್ತಪಡಿಸಿದ್ದು, ಯಡಿಯೂರಪ್ಪ ಸೇರಿದಂತೆ ಹಲವು ಹಿರಿಯ ನಾಯಕರಿಗೆ ತಲೆನೋವಾಗಿದೆ.
ಭಾನುವಾರವೇ ಘೋಷಣೆಯಾಗಬೇಕಿದ್ದ ಮೊದಲ ಪಟ್ಟಿಯಲ್ಲಿ ಪ್ರಧಾನಿ ಮೋದಿ ಹಲವು ಬದಲಾವಣೆಗಳನ್ನು ಸೂಚಿಸಿದ್ದಾರೆ. ಮೊದಲ ಪಟ್ಟಿ ಸಿದ್ಧಪಡಿಸಲು ರಾಜ್ಯ ನಾಯಕರು ಮತ್ತೆ ಚರ್ಚೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಇದೇ ಕಾರಣದಿಂದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಲು ಇನ್ನೂ ಒಂದು ಅಥವಾ ಎರಡು ದಿನ ವಿಳಂಬವಾಗುವ ನಿರೀಕ್ಷೆಯಿದೆ. ಮಾತ್ರವಲ್ಲದೆ ಕೆಲವು ಸ್ಥಾನಗಳಿಗೆ ಹೊಸ ಮುಖಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ. ಹಾಲಿ ಶಾಸಕರು ಮತ್ತು ಸಂಸದರ ಮಕ್ಕಳಿಗೆ ಟಿಕೆಟ್ ನೀಡಲು ಪ್ರಧಾನಿ ನರೇಂದ್ರ ಮೋದಿ ಅಸಮ್ಮತಿ ವ್ಯಕ್ತಪಡಿಸಿರುವುದು ಬಿಜೆಪಿ ಟಿಕೆಟ್ ಘೋಷಣೆ ವಿಳಂಬವಾಗಲು ಕಾರಣ ಎಂಬ ಮಾಹಿತಿ ಬಿಜೆಪಿ ಪಾಳಯದಿಂದ ಹೊರಬಿದ್ದಿದೆ.
ಮಾಜಿ ಮುಖ್ಯಮಂತ್ರಿ ಮತ್ತು ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಪ್ರಧಾನಮಂತ್ರಿಯವರ ಕಠಿಣ ನಿಲುವಿನಿಂದ ಅಸಮಾಧಾನಗೊಂಡಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ. ಈ ಕಾರಣಕ್ಕೆ ಭಾನುವಾರದ ಸಿಇಸಿ ಸಭೆಯ ಮಧ್ಯದಲ್ಲಿಯೇ ಯಡಿಯೂರಪ್ಪ ಎದ್ದು ಹೋಗಿದ್ದಾರೆ ಎನ್ನಲಾಗುತ್ತಿದೆ. ಶಿಕಾರಿಪುರದಿಂದ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಯಡಿಯೂರಪ್ಪ ಪಟ್ಟು ಹಿಡಿದಿದ್ದು, ತಮ್ಮ 15 ಮಂದಿಗೆ ಸೀಟು ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಸಭೆಯಲ್ಲಿ ವಿಜಯೇಂದ್ರಗೆ ಟಿಕೆಟ್ ನೀಡುವ ನಿರ್ಧಾರ ಪ್ರಧಾನಿಗೆ ಬಿಟ್ಟು, ಯಡಿಯೂರಪ್ಪ ಅವರ ಹಿಂಬಾಲಕರಿಗೆ ಟಿಕೆಟ್ ನೀಡುವ ಪ್ರಸ್ತಾಪವನ್ನು ನಾಯಕರು ತಳ್ಳಿಹಾಕಿದ್ದಾರೆ ಎನ್ನಲಾಗುತ್ತಿದೆ.