ಬೆಂಗಳೂರು : ನನ್ನ ಜೀವನದಲ್ಲಿ ನಾನು ಯಾವತ್ತಿಗೂ ಸುಳ್ಳು ಹೇಳಿಲ್ಲ. ಏನೋ ಸುಳ್ಳು ಹೇಳಿ ಸಿಎಂ ಆಗುವ ಆಸೆಯೂ ನನಗಿಲ್ಲ. ಸುಳ್ಳು ಹೇಳಿದಂತವರು ಕಾಂಗ್ರೆಸ್ ನಾಯಕರು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡಲಸಂಗಮದಲ್ಲಿ ಆಣೆ ಮಾಡಿ ಅಧಿಕಾರಕ್ಕೆ ಬಂದು ಜನರಿಗೆ ಮೋಸ ಮಾಡಿದವರು ಕಾಂಗ್ರೆಸ್ ನವರು. ಈಗ ಕಾವೇರಿ ಕೊಳ್ಳದ ಜನರಿಗೆ ಅಧಿಕಾರಕ್ಕಾಗಿ ಮೋಸ ಮಾಡುತ್ತಿದ್ದಾರೆ. ನಾನು ಎಂದಿಗೂ ದಾಖಲೆ ಇಟ್ಟುಕೊಂಡೇ ಮಾತಾಡಿದ್ದೇನೆ. ನಾನೇನು ಬಿಜೆಪಿ ಆಫೀಸ್ ನಲ್ಲಿರುವ ಕಾಗದ ಪತ್ರ ತಂದು ಹೇಳಿಲ್ಲ. ಹಿಂದಿನ ನಿಮ್ಮ ಸರ್ಕಾರದ ಅವಧಿಯಲ್ಲಿನ ದಾಖಲೆಗಳನ್ನೇ ಬಹಿರಂಗ ಪಡಿಸಿದ್ದೇನೆ ಎಂದರು.
ಕಾಂಗ್ರೆಸ್ ನವರ ಈ ಗಿಮಿಕ್ ನಡೆಯುವುದಿಲ್ಲ, ನೀವು ನಿಶ್ಚಿತವಾಗಿ ಪ್ರತಿಪಕ್ಷದಲ್ಲೇ ಇರಬೇಕು. ಡಬಲ್ ಇಂಜಿನ್ ಕಿತ್ತೊಗೆಯಬೇಕು ಎಂಬ ಭ್ರಮೆಯಲ್ಲಿದ್ದೀರಿ. ಎಂದಿಗೂ ನಿಮ್ಮ ಆಸೆ ಈಡೇರುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗೆ ಕಾರಜೋಳ ತಿರುಗೇಟು ನೀಡಿದರು.