ಸಾಹಿತ್ಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಕೆಲಸ ಮಾಡಬೇಕು, ಸಾಂತ್ವನವನ್ನು ನೀಡುವ ಮೂಲಕ ಔಷಧಿಯಂತೆ ಕಾರ್ಯನಿರ್ವಹಿಸಬೇಕು. ಸಾಂತ್ವನ ನೀಡದ ಸಾಹಿತ್ಯ ಸಾರ್ವಕಾಲಿಕವಾಗುವುದಿಲ್ಲ ಎಂಬುದಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಡಾ. ಬಿ.ವಿ. ವಸಂತಕುಮಾರ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಅಂಕಿತ ಪುಸ್ತಕ ಮತ್ತು ಬುಕ್ ಬ್ರಹ್ಮದ ಜಂಟಿ ಆಶ್ರಯದಲ್ಲಿ ಲೇಖಕ ಪ್ರೊ. ಎಚ್.ಟಿ. ಪೋತೆ ಅವರ ʼಮಹಾಬಿಂದುʼ ಕಾದಂಬರಿ ಹಾಗೂ ಎಂ.ಆರ್. ದತ್ತಾತ್ರಿ ಅವರ ʼಒಂದೊಂದು ತಲೆಗೂ ಒಂದೊಂದು ಬೆಲೆʼ ಕಾದಂಬರಿಯ ಲೋಕಾರ್ಪಣಾ ಸಮಾರಂಭವು 2022 ಎಪ್ರಿಲ್ 17 ಭಾನುವಾರದಂದು ಬೆಂಗಳೂರಿನ ಬನಶಂಕರಿಯ ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಆವರಣದಲ್ಲಿ ನಡೆದಿದೆ. ಈ ವೇಳೆ ಕೃತಿಗಳನ್ನು ಲೋಪಾರ್ಪಣೆಗೊಳಿಸಿ ಅವರು ಮಾತನಾಡಿದರು.
ವರ್ತಮಾನದ ತಲ್ಲಣ, ಸಂಕಟ, ಸಮಸ್ಯೆಗಳಿಗೆ ಪರಿಹಾರ ನೀಡುವ ಕೃತಿಗಳಿವು. ಎರಡೂ ಕಾದಂಬರಿಗಳು ಭಿನ್ನ ನೆಲೆಯಲ್ಲಿ ಭಿನ್ನ ಅನುಭವ, ವಿಚಾರಧಾರೆಯಿಂದ ಗಮನಸೆಳೆದರೂ, ಎರಡೂ ಕೃತಿಗಳಲ್ಲಿ ಬೇಕಿರುವ ಪರಿಹಾರ ಒಂದೇ ಆಗಿದೆ ಎಂಬುದಾಗಿ ಅವರು ನುಡಿದರು.
ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಮಾತನಾಡಿ, ಯಾವುದೇ ಸಾಹಿತ್ಯಕ್ಕೆ ಪ್ರಾಣಶಕ್ತಿ ಮುಖ್ಯ. ಈ ನಿಟ್ಟಿನಲ್ಲಿ ಮಹಾಬಿಂದು ಕಾದಂಬರಿಯನ್ನು ವಿಶ್ಲೇಷಿಸಿದರೆ, ಬುದ್ಧತತ್ವವನ್ನು , ಅಂಬೇಡ್ಕರ್ ಚಿಂತನೆಗಳನ್ನು ಹಾಗೂ ಬಸವಣ್ಣನ ವಿಚಾರಧಾರೆಗಳೇ ಪ್ರಾಣಶಕ್ತಿಯಂತೆ ಕಾರ್ಯನಿರ್ವಹಿಸಿದೆ. ಅಲ್ಲದೆ ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಹಂಚಿರುವುದು ಶ್ಲಾಘನೀಯ ಎಂಬುದಾಗಿ ಹೇಳಿದರು.
ಲೇಖಕ ಡಾ. ಎಚ್.ಎಸ್. ಸತ್ಯನಾರಾಯಣ ಅವರು ಲೇಖಕ ದತ್ತಾತ್ರಿ ಅವರ ‘ಒಂದೊಂದು ತಲೆಗೂ ಒಂದೊಂದು ಬೆಲೆ’ ಕೃತಿ ಪರಿಚಯವನ್ನು ಮಾಡಿದರು. ಅಲ್ಲದೆ ಕನ್ನಡ ಕಾದಂಬರಿ ಲೋಕದಲ್ಲಿ ಕಾದಂಬರಿಯಿಂದ ಕಾದಂಬರಿಗೆ ಹೊಸ ಶೋಧವನ್ನು ಹುಟ್ಟಿಸಿದರು ಲೇಖಕ ದತ್ತಾತ್ರಿ.ಈ ಕಾದಂಬರಿಯ ಹಂದರಕ್ಕೆ ಭಾವತೀವರ್ವತೆಯಯಾಗಲೀ ವೈಚಾರಿಕತೆಯ ಭಾರವಗಲಿ ಭಂಗ ತರಬಾರದೆಂಬ ಎಚ್ಚರವನ್ನು ದತ್ತಾತ್ರಿ ರೂಢಿಸಿಕೊಂಡಿರುವುದು ಮೆಚ್ಚುಗೆ ವಿಚಾರ. ಕಾರ್ಪೊರೇಟ್ ಜಗತ್ತಿನ ಹೊಸ ಬಗೆಯ ಫ್ಯೂಡಲಿಸಂ ಈ ಕೃತಿ ಎಂಬುದಾಗಿ ನುಡಿದರು.
ಲೇಖಕ ಎಂ.ಆರ್. ದತ್ತಾತ್ರಿ ಅವರು ಮಾತನಾಡಿ, ಲೇಖಕ ಬರೆದು ಬರೆದು ಮಾಗಬೇಕು..ಎಷ್ಟೇ ಮಾಗಿದ್ದೀವಿ ಅಂದುಕೊಂಡರೂ ಸಾಹಿತ್ಯ ಪ್ರಪಂಚದಲ್ಲಿ ಅಭಿವ್ಯಕ್ತಿಗೆ ಸಾಲುವುದಿಲ್ಲ ಎಂದರು.
ಹಿರಿಯ ಲೇಖಕ, ಮಹಾಬಿಂದು ಖಾದಂಬರಿ ಕರ್ತೃ ಎಚ್.ಟಿ. ಪೋತೆ ಅವರು ಮಾತನಾಡಿ, ಅಂಬೇಡ್ಕರ್, ಬುದ್ಧ, ಬಸವಣ್ಣ ಎಲ್ಲರೂ ಜಾತಿಯ ನಿಂಧನೆ, ಸಮಸ್ಯೆಗಳಿಗೆ ಒಳಗಾದವರೇ ಆಗಿದ್ದಾರಾತೆ. ಇಂದಿಗೂ ಈ ಆತಂಕ ಕಡಿಮೆಯಾಗಿಲ್ಲ ಎಂಬುದು ನೋವಿನ ಸಂಗತಿ..ಈ ವಿಚಾರವನ್ನೇ ಬಿಂದುವನ್ನಾಗಿಟ್ಟುಕೊಂಡು ಮಹಾಬಿಂದು ಕಾದಂಬರಿಯನ್ನು ರಚಿಸಿರುವುದಾಗಿ ಹೇಳಿದರು.
ಅಲ್ಲದೆ ಯಾವುದೇ ಕೃತಿ ತನ್ನಷ್ಟಕ್ಕೆ ತಾನೇ ಪೂರ್ಣವಾಗುವುದಿಲ್ಲ..ಓದುಗರು ಅದನ್ನು ಸ್ವೀಕಾರ ಮಾಡುವ ಹಾಗೂ ಅನುಸರಿಸುವ ಮೂಲಕ ಅದು ಪರಿಪೂರ್ಣವಾಗುತ್ತದೆ. ಆ ಪರಿಪೂರ್ಣತೆಯನ್ನು ಕಾಣಲು ಓದುಗರು ಕೈಜೋಡಿಸಬೇಕಿದೆ ಎಂಬುದಾಗಿ ನುಡಿದರು.