ಬೆಂಗಳೂರು: ಸಚಿವ ಅಶ್ವಥ್ ನಾರಾಯಣ ಅವರನ್ನು ಇತ್ತೀಚೆಗೆ ಭೇಟಿ ಮಾಡಿಲ್ಲ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರು ಮಂಗಳವಾರ ಹೇಳಿದ್ದಾರೆ.
ಇಂದು ನಗರದ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್ ಅವರು, ಅಶ್ವಥ್ ನಾರಾಯಣ್ ಅವರ ಮಗಳು ಮತ್ತು ನನ್ನಮಗ ಸ್ನೇಹಿತರು. ಹಾಗಾಗಿ ಭೇಟಿ ಸ್ವಾಭಾವಿಕ.
ಅವರನ್ನು ನಾನು ಭೇಟಿ ಮಾಡಲ್ಲ ಅಂತ ಏನೂ ಇಲ್ಲ. ಆದರೆ ಇತ್ತೀಚಿಗೆ ಅವರನ್ನು ನಾನು ಭೇಟಿಮಾಡಿಲ್ಲ. ಭೇಟಿ ಮಾಡಬಾರದು ಅಂತ ಏನೂ ಇಲ್ಲ. ನಾನು ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೇನೆ. ಅವರು ಮತ್ತೊಂದು ಪಕ್ಷದ ಸೀನಿಯರ್ ಲೀಡರ್ ಇದ್ದಾರೆ. ನಿನ್ನೆ ಎಂಜಿನಿಯರಿಂಗ್ ಪ್ರೋಗ್ರಾಂ ಇತ್ತು. ಅಲ್ಲಿಗೆ ನನ್ನನ್ನ ಆಹ್ವಾನಿಸಿದ್ರು, ನಾನು ಹೋಗಲಿಲ್ಲ ಎಂದು ವಿವರಿಸಿದರು.
ಅಶ್ವತ್ಥ ನಾರಾಯಣ್ ಅವರು ತಮ್ಮ ಇಲಾಖೆ ಹಗರಣಗಳ ವಿಚಾರಗಳ ಬಗ್ಗೆ ಯಾರು ಧ್ವನಿ ಎತ್ತರಬಾರದೆಂದು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದ್ದರು.
ವಿಧಾನಸಭಾ ಚುನಾವಣೆ ತಯಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದೇ ತಿಂಗಳು 13. 14, 15 ಉದಯಪುರದಲ್ಲಿ ಎಐಸಿಸಿ ಚಿಂತನಮಂಥನ ಶಿಬಿರವಿದೆ. ಅಲ್ಲಿ ಸುರ್ಜೇವಾಲರನ್ನ ಭೇಟಿಮಾಡ್ತೇನೆ. ನನ್ನ ಆಕ್ಷನ್ ಪ್ಲಾನ್ ಅವರಿಗೆ ಹೇಳ್ತೇನೆ. ನಂತರ ಎಲ್ಲಾ ಜಿಲ್ಲೆಗೆ ಭೇಟಿ ಕೊಡ್ತೇನೆ. ಆ ಜಿಲ್ಲೆಗೆ ಭೇಟಿ ನೀಡಿದ ನಂತರ ರೂಪುರೇಷೆ ಸಿದ್ದಮಾಡ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಭ್ರಷ್ಟಾಚಾರ ಮಾಡಿಲ್ವಾ ಎಂಬ ಸಿಎಂ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಮಾಡಿದ್ರೆ ಆರೋಪ ಮಾಡಬಹುದಿತ್ತು, ಆಗ ಇವರು ಸುಮ್ಮನಿದ್ದಿದ್ದು ಯಾಕೆ? ಸುಮ್ಮನಿರೋದು ಅಪರಾಧವಲ್ಲವೇ? ಮೂರು ವರ್ಷ ಆಯ್ತು ತನಿಖೆ ಮಾಡಬಹುದಿತ್ತಲ್ಲಾ? ಯಾಕೆ ಯಾವ ತನಿಖೆ ಮಾಡಲಿಲ್ಲ. ಇವರು ಬಂದ ಮೇಲೆ ಯಾಕೆ ಇಷ್ಟೊಂದು ಎಲ್ಲದರಲ್ಲೂ ಭ್ರಷ್ಟಾಚಾರದ ಆರೋಪ ಬರ್ತಿದೆ? ಬಿ.ಸಿ.ಪಾಟೀಲ್ ಆಪರೇಷನ್ ಗೆ ಹೋದವರಲ್ವೇ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡೋಕೆ ನೈತಿಕತೆ ಇದ್ಯಾ? ಎಂದು ಪ್ರಶ್ನಿಸಿದರು.
ಪಿಎಸ್ ಐ ನೇಮಕಾತಿ ಹಗರಣ ಸಂಬಂಧ ಮಾತನಾಡಿದ ಅವರು, ಅಶ್ವಥ್ ನಾರಾಯಣ್ ಮೇಲೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದರು. ನಾವು ಯಾವುದನ್ನ ಬಿಟ್ಟಿಲ್ಲ. ಅಶ್ವಥ್ ನಾರಾಯಣ್ ಮೊದಲು ರಾಜೀನಾಮೆ ಕೊಡಬೇಕು. ಸಚಿವರಾಗಿರೋದ್ರಿಂದ ತನಿಖೆ ಮಾಡಲ್ಲ. ಸಬ್ ಇನ್ಸ್ ಪೆಕ್ಟರ್ ತನಿಖೆ ಮಾಡೋಕೆ ಸಾಧ್ಯವೇ. ಹಾಗಾಗಿ ಅಶ್ವಥ್ ನಾರಾಯಣ್ ರಿಸೈನ್ ಮಾಡಬೇಕು. ಧ್ವನಿ ಎತ್ತಿದ್ದವರಿಗೆ ನೊಟೀಸ್ ಕೊಡ್ತಾರೆ. ಪಿಎಸ್ಐ ನೇಮಕಾತಿಯಲ್ಲಿ ಅಶ್ವಥ್ ನಾರಾಯಣ್ ಸಹೋದರನ ಹೆಸರಿದೆ. ಅಶ್ವಥ್ ನಾರಾಯಣ್ ಗೆ ಯಾಕೆ ನೊಟೀಸ್ ಕೊಟ್ಟಿಲ್ಲ ಎಂದು ಎಂ.ಬಿ. ಪಾಟೀಲ್ ಪ್ರಶ್ನಿಸಿದರು.