ಬೆಂಗಳೂರು, ಡಿ.3 : ವಿದೇಶದಿಂದ ಕರ್ನಾಟಕಕ್ಕೆ ಬಂದವರು ತಮ್ಮ ಮೊಬೈಲ್ಗಳನ್ನು ಸ್ವಿಚ್ಆಫ್ ಮಾಡಿಕೊಂಡರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಓಮಿಕ್ರಾನ್ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಬೇಗ ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ವಿದೇಶದಿಂದ ಬಂದವರು ನಮಗೆ ಏನೋ ಆಗಿಬಿಡುತ್ತದೆ ಎಂಬ ಭಯದಿಂದ ಮೊಬೈಲ್ಗಳನ್ನು ಸ್ವಿಚ್ಆಫ್ ಮಾಡಿಕೊಳ್ಳುವುದು ಸರಿಯಲ್ಲ. ಹಾಗೊಂದು ವೇಳೆ ಯಾರಾದರೂ ಸ್ವಿಚ್ ಆಫ್ ಮಾಡಿದರೆ ಕಾನೂನು ತರಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ಆರೋಗ್ಯ ಸೌಧದಲ್ಲಿ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ದಕ್ಷಿಣ ಆಫ್ರಿಕಾದಿಂದ ಬಂದವರಲ್ಲಿ 10 ಜನ ಕಣ್ತಪ್ಪಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಅವರನ್ನು ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದರು. ಯಾವುದೇ ಒಬ್ಬ ಜವಾಬ್ದಾರಿಯುತ ನಾಗರಿಕ ಹೀಗೆ ಮಾಡುವುದು ಸರಿಯಲ್ಲ. ವಿದೇಶದಿಂದ ಬಂದವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
ನಿಮಗೆ ಅಗತ್ಯವಿದ್ದರೆ ಮಾತ್ರ ಚಿಕಿತ್ಸೆ ನೀಡುತ್ತೇವೆ. ಅನಗತ್ಯವಾಗಿ ಮೊಬೈಲ್ಗಳನ್ನು ಏಕೆ ಸ್ವಿಚ್ಆಫ್ ಮಾಡಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು.
ಒಂದು ಮತ್ತು ಎರಡನೆ ಅಲೆ ಸಂದರ್ಭದಲ್ಲೇ ಕೆಲವರು ಈ ರೀತಿ ಮೊಬೈಲ್ಗಳನ್ನು ಸ್ವಿಚ್ಆಫ್ ಮಾಡಿಕೊಂಡಾಗಲೇ ನಾವು ಪತ್ತೆ ಮಾಡಿದ್ದೆವು. ಈಗ ಸ್ವಿಚ್ಆಫ್ ಮಾಡಿಕೊಂಡ ತಕ್ಷಣ ಇವರನ್ನು ಬಿಟ್ಟುಬಿಡುತ್ತೇವೆಂದು ಅರ್ಥವಲ್ಲ. ನೀವು ಎಲ್ಲೇ ಇದ್ದರೂ ಪತ್ತೆಹಚ್ಚುತ್ತೇವೆ ಎಂದರು.
ಇಂದು ನಡೆದ ಸಭೆಯಲ್ಲಿ ಅಧಿಕಾರಿಗಳು ಕೆಲವು ಸಲಹೆಗಳನ್ನೂ ನೀಡಿದ್ದಾರೆ. ಮುಂದಿನ ಎರಡು ತಿಂಗಳು ಯಾವೆಲ್ಲ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು, ವಿದೇಶದಿಂದ ಬರುವವರ ಮೇಲೆ ನಿಗಾ ವಹಿಸುವುದು, ಸೋಂಕು ಹಬ್ಬದಂತೆ ತಡೆಗಟ್ಟುವುದು ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.