ಬೆಂಗಳೂರು, ಜೂ. 8: ಹೊಂದಾಣಿಕೆಯ ಮೇಲೆ ಭಾರತೀಯ ಜನತಾ ಪಕ್ಷ ನಿಂತಿಲ್ಲ. ಏನಾಗುತ್ತದೆ ಎಂದು ಕಾದು ನೋಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ನಡೆದ ಭಾ.ಜ.ಪ ಶಾಸಕಾಂಗ ಪಕ್ಷದ ಸಭೆಯ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯ ಸಭಾ ಚುನಾವಣೆ ಮೀಸಲಾತಿ ನಿಗದಿಯಾಗಿರುವ ಪ್ರಕಾರ ಆಗಲಿದೆ. ನಾಲ್ಕನೇ ಸುತ್ತಿಗೆ ಕೋಟಾ ಮುಟ್ಟುವ ಪರಿಸ್ಥಿತಿ ಇಲ್ಲ. ಹಾಗಾಗಿ ಎಲಿಮಿನೇಷನ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಹೊರಹೋದವರ ಮತಗಳು ವರ್ಗಾವಣೆ ಆಗುತ್ತವೆ ಎಂದರು.
ಇಂದಿನ ರಾಜಕೀಯ ಸ್ಥಿತಿಗತಿಯನ್ನು ಅವಲೋಕಿಸಿದರೆ ಭಾರತೀಯ ಜನತಾ ಪಕ್ಷಕ್ಕೆ 32 ಹೆಚ್ಚುವರಿ ಇದ್ದು, ಎರಡನೇ ಪ್ರಾಶಸ್ತ್ಯದಲ್ಲಿ ಮತದಾನವಾದರೆ, ಮತಗಳು ದೊರೆಯಲಿದೆ. ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಆಯ್ಕೆಯಾಗಲಿದ್ದಾರೆ. ರಾಜ್ಯ ಸಭಾ ಚುನಾವಣೆ ನಡೆದ ಸಂದರ್ಭದಲ್ಲಿ ಪಕ್ಷದಲ್ಲಿ ಏರುಪೇರಾಗಿರುವುದು ಇದೆ. ಈ ಚುನಾವಣೆ ಹೀಗೇ ಆಗುತ್ತದೆ ಎಂದು ಹೇಳುವುದು ಕಷ್ಟ. ಚುನಾವಣೆ ಪ್ರಕ್ರಿಯೆಯ ಮಧ್ಯಂತರ ದಲ್ಲಿ ಬದಲಾವಣೆಗಳಾಗಿವೆ. ಅಲ್ಲಿಯವರೆಗೂ ಕಾಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.