ಬೆಂಗಳೂರು: ರಾಜ್ಯದ 29 ಜಿಲ್ಲೆಗಳು ಕೋವಿಡ್ ಸಾವಿನಿಂದ ಮುಕ್ತಗೊಂಡಿದೆ. ಶನಿವಾರ ಕೋವಿಡ್ ಸೋಂಕಿನಿಂದ ಬೆಂಗಳೂರು ನಗರದ ಮಹಿಳೆಯೊಬ್ಬರು ಮೃತಪಟ್ಟಿದ್ದು, ದಿನದ ಮರಣ ಪ್ರಮಾಣ ದರ ಶೇ.1.26ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ 29 ಜಿಲ್ಲೆಗಳು ಕೋವಿಡ್ ಸಾವಿನಿಂದ ಮುಕ್ತಗೊಂಡಂತಾಗಿದೆ.
ಕಳೆದ 24 ಗಂಟೆಗಳಲ್ಲಿ 79 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ದಿನದ ಸೋಂಕು ಪ್ರಮಾಣ ದರ ಶೇ.0.26ಕ್ಕೆ ಕುಸಿದಿದೆ. 94 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರ ಸಂಖ್ಯೆ 39.03 ಲಕ್ಷ ಮೀರಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 1,776ಕ್ಕೆ ತಲುಪಿದೆ. ಈವರೆಗೂ 40,049 ಸೋಂಕಿತರು ಮೃತಪಟ್ಟಿದ್ದು, 39.45 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ. ಬೆಂಗಳೂರು ನಗರದಲ್ಲಿ 58 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 7 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಒಂದಂಕಿಗೆ ಇಳಿಕೆಯಾಗಿದೆ.