ಬೆಂಗಳೂರು: ಜೂನ್ನಲ್ಲಿ ಕೋವಿಡ್ ನಾಲ್ಕನೇ ಅಲೆ ಬರುವ ಸಾಧ್ಯತೆ ಕುರಿತು ತಜ್ಞರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿದೆ. ಮತ್ತೊಂದೆಡೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ (1,854ಕ್ಕೆ ಏರಿಕೆ) ಕರ್ನಾಟಕ ನಾಲ್ಕನೇ ಸ್ಥಾನಕ್ಕೇರಿರುವುದು ಆತಂಕಕ್ಕೆ ಕಾರಣವಾಗಿದೆ.
ದೆಹಲಿ ಕೋವಿಡ್ ಸಕ್ರಿಯ ಪ್ರಕರಣಗಳಲ್ಲಿ (5,746 )ಮೊದಲ ಸ್ಥಾನದಲ್ಲಿದ್ದರೆ, ಕೇರಳ (2,888) 2 ಹಾಗೂ ಹರಿಯಾಣ (2,535) 3ನೇ ಸ್ಥಾನದಲ್ಲಿದೆ. ಕರ್ನಾಟಕದ ಬಳಿಕ ಉತ್ತರ ಪ್ರದೇಶ (1,742) 5ನೇ ಸ್ಥಾನ ಹಾಗೂ ಮಹಾರಾಷ್ಟ್ರ (1,109) 6ನೇ ಸ್ಥಾನದಲ್ಲಿದೆ. ಉಳಿದಂತೆ 18 ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 500ಕ್ಕಿಂತ ಕಡಿಮೆ ಇದೆ. 8 ರಾಜ್ಯಗಳಲ್ಲಿ ಒಂದಂಕಿ ಇದೆ.
ಕರ್ನಾಟಕದಲ್ಲಿ ಕಳೆದ ಎರಡು ತಿಂಗಳಲ್ಲಿ 6 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣ ವರದಿಯಾಗಿದ್ದು, 65 ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ನೆರೆಯ ಕೇರಳದಲ್ಲಿ ಸೋಂಕಿನ ಪ್ರಮಾಣದ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚಿದ್ದು, ಮೇ 3ರಂದು ಒಂದೇ ದಿನ 52 ಸಾವು ಹಾಗೂ ಮೇ 5ರಂದು 26 ಸಾವು ಸಂಭವಿಸಿದೆ.
ರಾಜ್ಯದಲ್ಲಿ ಶುಕ್ರವಾರ 15,759 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 181 ಮಂದಿಗೆ ಸೋಂಕು ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,895ಕ್ಕೆ ಏರಿಕೆಯಾಗಿದೆ. ವಿಜಯಪುರದಲ್ಲಿ ಸೋಂಕಿನಿಂದ 50 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಮೃತರ ಒಟ್ಟು ಸಂಖ್ಯೆ 40,061 ತಲುಪಿದೆ. ಕಳೆದ 24 ಗಂಟೆಗಳಲ್ಲಿ 139 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರ ಒಟ್ಟು ಸಂಖ್ಯೆ 39.06 ಲಕ್ಷ ಮೀರಿದೆ. ಈವರೆಗೂ 39.48 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ. ಬೆಂಗಳೂರು ನಗರದಲ್ಲಿ 149 ಮಂದಿ, ಮೈಸೂರಿನಲ್ಲಿ 27, ದಣ ಕನ್ನಡದಲ್ಲಿ ಮೂವರು ಹಾಗೂ ಹಾಸನ ಮತ್ತು ಕಲಬುರಗಿಯಲ್ಲಿ ತಲಾ ಒಬ್ಬರು ಸೇರಿ 181 ಮಂದಿಗೆ ಸೋಂಕು ದೃಢಪಟ್ಟಿದೆ.