ಬೆಂಗಳೂರು: ಕರಾಟೆ ಅಭ್ಯಾಸ ನಿರತ ಯುವ ಕರಾಟೆ ಪಟುವಿಗೆ ಎದೆನೋವು ಕಾಣಿಸಿಕೊಂಡು, ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದಾಸರಹಳ್ಳಿ ಹೆಸರಘಟ್ಟ ರಸ್ತೆಯ ಎಂಇಐ ಕರಾಟೆ ಶಾಲೆಯಲ್ಲಿ ಈ ದಾರುಣ ಘಟನೆ ನಡೆದಿದ್ದು, ಕೆರೆಗುಡ್ಡದ ಹಳ್ಳಿಯ ಪ್ರವೀಣ್ (22) ಮೃತಪಟ್ಟವರು.
ಕರಾಟೆ ತರಬೇತಿ ವೇಳೆ ಪ್ರವೀಣ್ ಗೆ ಎದೆನೋವು ಕಾಣಿಸಿಕೊಳ್ಳುತ್ತಿದ್ದಂತೆಯೇ ಕರಾಟೆ ಶಿಕ್ಷಕ ಲೋಕೇಶ್ ಸ್ಥಳೀಯ ಶ್ರೀನಿವಾಸ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಎನ್.ಆರ್.ಆರ್. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಪ್ರವೀಣ್ ಸಾವನ್ನಪ್ಪಿದ್ದಾರೆ.
ಮಗನ ಸಾವಿನ ವಿಷಯ ತಿಳಿದ ಪ್ರವೀಣ್ ಪೋಷಕರು, ಈ ಸಾವಿನ ಹಿಂದೆ ಪ್ರಥಮ ಚಿಕಿತ್ಸೆ ಕೊಟ್ಟ ಆಸ್ಪತ್ರೆ ವೈದ್ಯ ಹಾಗೂ ಕರಾಟೆ ಶಿಕ್ಷಕ ಲೋಕೇಶ್ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಸಪ್ತಗಿರಿ ಆಸ್ಪತ್ರೆ ಶವಾಗಾರದ ಎದುರು ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸೋಲದೇವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.