ಬೆಂಗಳೂರು : ಪ್ರಾಥಮಿಕ ಶಾಲೆಗಳಲ್ಲಿ “ಡಿ” ಗ್ರೂಪ್ ನೌಕರರು ಹಾಗೂ ಲಿಪಿಕ ನೌಕರರು ಇಲ್ಲದೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಬಡ್ತಿ ಮುಖ್ಯ ಶಿಕ್ಷಕರ ಸಂಘದ ಬೇಡಿಕೆಗಳನ್ನು 15 ದಿನದ ಒಳಗೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡುತ್ತೇವೆಂದು ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ರಾಜ್ಯಾಧ್ಯಕ್ಷ ಕೆ. ಕೃಷ್ಣಪ್ಪ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ಪ್ರಾಥಮಿಕ ಶಾಲಾ ಬಡ್ತಿ ಮುಖ್ಯ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ಇರುವುದಿಲ್ಲ. ಸೇವಾ ಅವಧಿಯಲ್ಲಿ ಕೇವಲ ಒಂದೇ ಬಾರಿ ಮಾತ್ರ ವೇತನ ಏರಿಕೆ ಮಾಡಲಾಗುತ್ತಿದೆ ಸಹ ಶಿಕ್ಷಕರಿಗೆ ನೀಡಿದಂತೆ ವಿಶೇಷ ಭತ್ಯೆ ಸೌಲಭ್ಯವನ್ನು ನಿಡದೆ ವಂಚಿಸಲಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಸಂಯೋಜಕರ ಹುದ್ದೆ ಬಡ್ತಿಯ ಹುದ್ದೆಯೇ ಹೊರತು ಪರೀಕ್ಷೆ ಬರೆದು ಗಳಿಸುವ ಹುದ್ದೆಯಲ್ಲ. ಶಿಕ್ಷಣ ಸಂಯೋಜಕರನ್ನು ಸೇವಾ ಜೇಷ್ಠತೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು. ಹಿಂದಿನ ಸರ್ಕಾರ ಆದೇಶದಂತೆ ಬಡ್ತಿ ಮುಖ್ಯ ಶಿಕ್ಷಕರಿಗೆ ಪರೀಕ್ಷೆ ಇಲ್ಲದೆ ಶಿಕ್ಷಣ ಸಂಯೋಜಕರ ಹುದ್ದೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
120 ಮಕ್ಕಳಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪದವೀಧರೇತರ ಮುಖ್ಯೋಪಾಧ್ಯಾಯರನ್ನು ಬಡ್ತಿ ಮೂಲಕ ತುಂಬಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಸರ್ಕಾರಿ ಹಿರಿಯ ಹಾಗೂ ಪದವೀಧರೇತನ ಮುಖ್ಯ ಶಿಕ್ಷಕರಿಗೆ 5-6 ವರ್ಷಗಳಿಂದ ಬಡ್ತಿ ನೀಡುತ್ತಿಲ್ಲ. ಇವರುಗಳ ಬಡ್ತಿ ಇಲ್ಲದೆಯೇ ಸಹ ಶಿಕ್ಷಕರಾಗಿಯೇ ನಿವೃತ್ತರಾಗುತ್ತಿದ್ದಾರೆ. ಹೀಗಾಗಿ ಸಹ ಶಿಕ್ಷಕರಿಗೆ ಬಡ್ತಿ ನೀಡಿ ಮುಖ್ಯೋಪಾಧ್ಯಾಯರನ್ನಾಗಿಸುವಂತೆ ಆಗ್ರಹಿಸಿದ್ದಾರೆ.
ಇನ್ನು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೂ ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ನೀಡುತ್ತಿರುವಂತೆ 30 ದಿನಗಳಿಕೆ ರಜೆಯನ್ನು ನೀಡಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದ್ದಾರೆ.