ಬೆಂಗಳೂರು : ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಕೇವಲ ರಾಜಕಾರಣಿಗಳು ಮಾತ್ರವಲ್ಲದೆ ಪ್ರಮುಖ ಅಧಿಕಾರಿಗಳು ಕೂಡಾ ಜನರೊಂದಿಗೆ ಬೆರೆಯುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು.
ಆಗ ಮಾತ್ರ ಸಾಮಾನ್ಯ ಜನರ ಸಮಸ್ಯೆಗಳು ಪರಿಹಾರವಾಗಲು ಸಾಧ್ಯ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಪಾಂಡಿಚೇರಿಯ ಮಾಜಿ ಲೆಫ್ಟಿನೆಂಟ್ ಗೌವರ್ನರ್ ಕಿರಣ್ ಬೇಡಿ ಅಭಿಪ್ರಾಯಪಟ್ಟರು.
ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ರವಿವಾರ ಆಯೋಜಿಸಲಾಗಿದ್ದ 3ನೇ ಆವೃತ್ತಿಯ ವಾರ್ಷಿಕ ಪರಿವರ್ತನ ನಾಯಕತ್ವ ಶೃಂಗಸಭೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜಿಸಿ ಸುರಾನಾ ಲೀಡರ್ಶಿಪ್ ಪ್ರಶಸ್ತಿ-2022 ಅನ್ನು ಸ್ವೀಕರಿಸಿ ಮಾತನಾಡಿದ ಅವರು, ಸರಕಾರದ ಪ್ರಮುಖ ಸ್ಥಾನಗಳಲ್ಲಿರುವ ಅಧಿಕಾರಿಗಳು ತಮ್ಮ ನಾಯಕತ್ವದ ಸರಿಯಾದ ಉಪಯೋಗ ಮಾಡಿಕೊಳ್ಳುವುದು ಬಹಳ ಅಗತ್ಯ. ಜನರಲ್ಲಿ ನಮ್ಮ ಆಡಳಿತದ ಬಗ್ಗೆ ನಂಬಿಕೆ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಧಿಕಾರಿಗಳು ಮತ್ತು ಪ್ರತೀ ಇಲಾಖೆಯ ಪ್ರಮುಖರು ಜನರ ಮಧ್ಯೆ ಬೆರೆಯುವ ಹಾಗೂ ಅಭಿವೃದ್ದಿ ಕಾರ್ಯಗಳನ್ನು ಸ್ವತಃ ಪರಿಶೀಲಿಸುವ ಪರಿಪಾಠವನ್ನು ಬೆಳೆಸಿಕೊಂಡಾಗ ಮಾತ್ರ ಅಭಿವೃದ್ದಿ ಕೆಲಸಗಳು ಬಹು ವೇಗವಾಗಿ ಸಾಗುತ್ತವೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವಥ್ ನಾರಾಯಣ್, ಕಾಲೇಜಿನ ಮುಖ್ಯಸ್ಥರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.