News Karnataka Kannada
Monday, April 29 2024
ಬೆಂಗಳೂರು ನಗರ

ಕ್ರಿಸ್‌ಮಸ್, ಹೊಸ ವರ್ಷ ಆಚರಣೆಗೆ ಕೋವಿಡ್ ಪಾಲನೆ ಕಡ್ಡಾಯ

Benglore Dc
Photo Credit :

ಬೆಂಗಳೂರು : ಕೋವಿಡ್-19 ರೂಪಾಂತರಿ ಓಮಿಕ್ರಾನ್’ ವೈರಾಣು ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಸಂಬಂಧ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಜಿಲ್ಲೆಯ ಜನತೆ ಪಾಲಿಸುವ ಮೂಲಕ ಕ್ರಿಸ್‌ಮಸ್ ಹಬ್ಬ ಹಾಗೂ ಹೊಸ ವರ್ಷವನ್ನು ಸರಳವಾಗಿ, ಭಕ್ತಿ ಪೂರಕವಾಗಿ ಮತ್ತು ಅರ್ಥಗರ್ಭಿತವಾಗಿ ಆಚರಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.

ಕ್ರಿಸ್‌ಮಸ್ ಆಚರಣೆ: ಚರ್ಚ್ ಆವರಣದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಪ್ರಾರ್ಥನೆ, ಸಾಮೂಹಿಕ ಇತ್ಯಾದಿಗಳನ್ನು ಕೋವಿಡ್ ಸಮುಚಿತ ವರ್ತನೆ ಅನುಸರಿಸುವುದು ಹಾಗೂ ಆಚರಣೆಗಳು ಅಥವಾ ಪ್ರಾರ್ಥನೆಗಳನ್ನು ನಡೆಸಲು ಯಾವುದೇ ಸಾರ್ವಜನಿಕ ಸ್ಥಳ, ರಸ್ತೆ, ಉದ್ಯಾನವನ ಇತ್ಯಾದಿಗಳನ್ನು ಬಳಸುವಂತಿಲ್ಲ.

ಹೊಸ ವರ್ಷಾಚರಣೆ: ಹೊಸ ವರ್ಷಾಚರಣೆ ಮಾರ್ಗಸೂಚಿಗಳು 2021ರ ಡಿಸೆಂಬರ್ 30ರಿಂದ 2022ರ ಜನವರಿ 2 ರವರೆಗೆ ಜಾರಿಯಲ್ಲಿರಲಿವೆ. ಕ್ಲಬ್, ಪಬ್‌ರೆಸ್ಟೋರೆಂಟ್, ಹೋಟೆಲ್, ಉದ್ಯಾನವನ ಅಥವಾ ಖಾಸಗಿ ಸ್ಥಳಗಳಲ್ಲಿ ಡಿಜೆ,  ಆರ್ಕೆಸ್ಟ್ರಾ, ಸಮೂಹ ನೃತ್ಯ ಮುಂತಾದ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿರುವುದಿಲ್ಲ.

ಹೊಸ ವರ್ಷವನ್ನು ಆಚರಿಸಲು ಸಾರ್ವಜನಿಕ ಸ್ಥಳಗಳು ಸೇರಿದಂತೆ ರಸ್ತೆ, ಉದ್ಯಾನವನ, ಆಟದ ಮೈದಾನ ಇತ್ಯಾದಿಗಳನ್ನು ಬಳಸಬಾರದು ಹಾಗೂ ರೆಸ್ಟೋರೆಂಟ್, ಹೋಟೆಲ್, ಕ್ಲಬ್, ಪಬ್ ಎಂದಿನಂತೆ ಕೋವಿಡ್ ಸಮುಚಿತ ವರ್ತನೆಯೊಂದಿಗೆ ಸಿಬ್ಬಂದಿಗಳು ಆರ್‌ಟಿಪಿಸಿಆರ್ ನೆಗಟಿವ್ ಮತ್ತು 2 ಡೋಸ್ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯುವ ಮೂಲಕ ಕಾರ್ಯನಿರ್ವಹಿಸಬಹುದು.

ರೆಸ್ಟೋರೆಂಟ್, ಹೋಟೆಲ್, ಕ್ಲಬ್, ಪಬ್‌ಗಳಿಗೆ ಪ್ರವೇಶ ನೀಡುವ ಸಾರ್ವಜನಿಕರು ಕಡ್ಡಾಯವಾಗಿ 2 ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿರುವುದನ್ನು ಪ್ರದರ್ಶಿಸಿದ ನಂತರವೇ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಹಾಗೂ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗೆ ಸಂಬಂಧಪಟ್ಟಂತೆ ಸಾಮಾಜಿಕ ಅಂತರ ಹಾಗೂ ಕೋವಿಡ್ ಸಮುಚಿತ ವರ್ತನೆಯೊಂದಿಗೆ ತಮ್ಮ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿಸಲಾಗಿದೆ. ಆದರೆ ಗುಂಪು ನೃತ್ಯಕ್ಕಾಗಿ ಡಿಜೆ, ಡ್ಯಾನ್ಸ್ ಫ್ಲೋರ್‌ನಂತಹ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಚರಿಸುವಂತಿಲ್ಲ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಹೋಟೆಲ್, ಮಾಲ್, ಪಬ್, ರೆಸ್ಟೋರೆಂಟ್ ಹಾಗೂ ಅಂತಹ ಪ್ರದೇಶಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು.

ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ಸಾರ್ವಜನಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಕಟ್ಟುನಿಟ್ಟಾಗಿ ಪಾಲಿಸಬೇಕು.

ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು, ಭಾರತ ದಂಡ ಸಂಹಿತೆಯ 188ನೇ ಪ್ರಕರಣದಡಿ ಹಾಗೂ ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳಡಿಯಲ್ಲಿನ ಕಾನೂನು ಕ್ರಮದ ಜೊತೆಗೆ ವಿಪತ್ತು ನಿರ್ವಹಣಾ ಅಧಿನಿಯಮ, 2005ರ ಸೆಕ್ಷನ್ 51 ರಿಂದ 60ರನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು