ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಿದ್ದು, ಎಲ್ಲಾ ಮಕ್ಕಳಿಗೂ ಸ್ವಾಗತ ಕೋರುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಆರಂಭವಾಗಲಿದ್ದು, ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೂ ಸ್ವಾಗತ ಕೋರುತ್ತೇನೆ. ಮಕ್ಕಳು ಶಾಲೆಯಲ್ಲಿ ಕಲಿತರೆ ಮಾತ್ರ ಒಳ್ಳೆಯ ಪರಿಣಾಮ ಬೀರುತ್ತೆ. ಮಕ್ಕಳಿಗೆ ಬೇಕಾದ ಪಠ್ಯ ಪುಸ್ತಕ, ಸೈಕಲ್ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಎರಡು ವರ್ಷಗಳ ಕೊರೊನಾ ಅಲೆಯಲ್ಲಾದ ಕಲಿಕೆ ನಷ್ಟ ತುಂಬುವ ಹಿನ್ನೆಲೆಯಲ್ಲಿ 15 ದಿನ ಮುಂಚಿತವಾಗಿ ಶಿಕ್ಷಣ ಇಲಾಖೆ ಶಾಲೆಗಳನ್ನು ಪ್ರಾರಂಭ ಮಾಡುತ್ತಿದೆ. ಈ 15 ದಿನ ಕಾಮನಬಿಲ್ಲು ಮತ್ತು ಕಲಿಕಾ ಚೇತರಿಕೆ ಅನ್ನೋ ವಿಶೇಷ ಕಾರ್ಯಕ್ರಮಗಳನ್ನು 1 ರಿಂದ 10 ನೇ ತರಗತಿಗಳಿಗೆ ಅನುಷ್ಠಾನ ಮಾಡಲಾಗುತ್ತಿದೆ.