ಬೆಂಗಳೂರು: ನಿರೀಕ್ಷೆಯಂತೆ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಬರಮಾಡಿಕೊಂಡರು.
ಈ ಸಂದರ್ಭ ಮಾತನಾಡಿದ ಜಗದೀಶ್ ಶೆಟ್ಟರ್, ಬಿಜೆಪಿಯನ್ನು ಕಟ್ಟಿ ಬೆಳೆಸಿದ ವ್ಯಕ್ತಿ ನಾನು. ಆದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಪಕ್ಷದ ಟಿಕೆಟ್ ಇಲ್ಲ ಎಂದಾಗ ಸ್ವಾಭಿಮಾನಕ್ಕೆ ಧಕ್ಕೆಯಾಯಿತು. ಜನರ ಅಭಿಪ್ರಾಯ, ಕಾರ್ಯಕರ್ತರ ಅಭಿಪ್ರಾಯ ಪಡೆದು ಈ ನಿರ್ಧಾರ ಕೈಗೊಂಡಿದ್ದೇನೆ. ಬಿಜೆಪಿ ನಾನು ಕಟ್ಟಿ ಬೆಳೆಸಿದ ಮನೆ. ಕಟ್ಟಿ ಬೆಳೆಸಿದ ಮನೆಯಿಂದ ಹೊರಹಾಕಿದ್ದಾರೆ.
ಬಿಜೆಪಿಯಲ್ಲಿ ಪಕ್ಷ ಮುಖ್ಯ ಅಲ್ಲ ವ್ಯಕ್ತಿಗಳು ಮುಖ್ಯ ಎಂಬ ಸ್ಥಿತಿಯಿದೆ. ಕೆಲವೇ ವ್ಯಕ್ತಿಗಳ ನಿರ್ದೇಶನದಂತೆ ಟಿಕೆಟ್ ಹಂಚಿಕೆ ಸೇರಿದಂತೆ ಎಲ್ಲ ನಿರ್ಧಾರ ಕೈಗೊಳ್ಳುತ್ತಾರೆ. ಬೊಮ್ಮಾಯಿ ಸಿಎಂ ಆದ ಬಳಿಕ 2 ವರ್ಷದಿಂದ ನನ್ನನ್ನು ಮೂಲೆಗುಂಪು ಮಾಡಲಾಗಿದೆ. ಯಡಿಯೂರಪ್ಪ ನಂತರ ನಾನೆ ಬಿಜೆಪಿಯಲ್ಲಿ ನಾನು ಪ್ರಮುಖ ನಾಯಕ. ಈ ನಿಟ್ಟಿನಲ್ಲಿ ನನ್ನ ಬೆಳವಣಿಗೆ ಸಹಿಸದ ಕೆಲವರು ಷಡ್ಯಂತ್ರ ರೂಪಿಸಿದ್ದಾರೆ ಎಂದು ವಿವರಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸರಳ, ಸಜ್ಜನಿಕೆಯ ಶ್ರೇಷ್ಠ ರಾಜಕಾರಣಿ, ಸೋಲಿಲ್ಲದ ಸರದಾರ. 6 ಬಾರಿ ಶಾಸಕರಾಗಿದ್ದವರು. ಅವರು ಪಕ್ಷ ಸೇರ್ಪಡೆಗೊಂಡಿರುವುದರಿಂದ ಕಾಂಗ್ರೆಸ್ ಮತ್ತಷ್ಠು ಬಲಿಷ್ಠವಾಗಿದೆ ಎಂದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಶೆಟ್ಟರ್ ಸೇರ್ಪಡೆಯಿಂದ ಕಾಂಗ್ರೆಸ್ಗೆ ಹೊಸ ಶಕ್ತಿ ಬಂದಿದೆ. ಹುಬ್ಬಳ್ಳಿ ಭಾಗದಲ್ಲಿ ಪಕ್ಷ ಸಂಘಟನೆಗೆ ಶೆಟ್ಟರ್ ನಿಶ್ಚಿತವಾಗಿ ಬಲ ತುಂಬಲಿದ್ದಾರೆ ಎಂದರು.