ಬೆಂಗಳೂರು: ನಕಲಿ ವಜ್ರದ ಹರಳುಗಳನ್ನು ಅಸಲಿ ಎಂದು ವ್ಯಕ್ತಿಯೊಬ್ಬರನ್ನು ನಂಬಿಸಿ ವಂಚನೆ ಮಾಡಲು ಯತ್ನಿಸಿದ ಆರೋಪದಡಿ ನಾಲ್ವರು ಆರೋಪಿಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬೆಂಗಳೂರು ಮೂಲದ ರವಿ, ನವೀನ್ ಕುಮಾರ್, ಗೂರ್ ಅಹಮದ್ ಹಾಗೂ ಅಬ್ದುಲ್ ದಸ್ತಗಿರ್ ಬಂಧಿತ ಆರೋಪಿಗಳು. ಆರೋಪಿಗಳಿಂದ ನಕಲಿ ಡೈಮಂಡ್ ಹರಳುಗಳು, ಹರಳು ಪರೀಕ್ಷಿಸುವ ಯಂತ್ರ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೈದರಾಬಾದ್ನ ರಾಜಮಂಡ್ರಿ ಮೂಲದ ಲಕ್ಷ್ಮೀನಾರಾಯಣ ಎಂಬುವವರು ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ಷ್ಮೀನಾರಾಯಣ ಅವರಿಗೆ ಮಾ.14ರಂದು ಪರಿಚಿತ ರವಿ ವಾಟ್ಸಾಪ್ ಕರೆ ಮಾಡಿ ವ್ಯವಹಾರ ಸಂಬಂಧ ಮಾತನಾಡಲು ವಿಮಾನ ನಿಲ್ದಾಣದ ತಾಜ್ ಹೋಟೆಲ್ಗೆ ಬರುವಂತೆ ಮಾಹಿತಿ ನೀಡಿದ್ದನು. ಲಕ್ಷ್ಮೀನಾರಾಯಣ ಅವರು ಮಾ.15ರಂದು ಬೆಳಗ್ಗೆ ತಮ್ಮ ಸ್ನೇಹಿತರಾದ ನಾಗೇಂದ್ರ ಮತ್ತು ರಾಮುಕುಮಾರ್ ಜತೆಗೆ ಹೋಟೆಲ್ಗೆ ಹೋಗಿದ್ದರು.
ಈ ಸಂದರ್ಭದಲ್ಲಿ ರವಿ ತನ್ನ ಜತೆಯಲ್ಲಿ ಕರೆತಂದಿದ್ದ ನವೀನ್ ಕುಮಾರ್, ಗೂರ್ ಅಹಮದ್ ಮತ್ತು ಅಬ್ದುಲ್ ದಸ್ತಗಿರ್ ಎಂಬುವವರನ್ನು ಪರಿಚಯಿಸಿ, ಇವರು ವಜ್ರದ ವ್ಯವಹಾರ ಮಾಡುತ್ತಿದ್ದಾರೆ ಎಂದು ತನ್ನ ಬಳಿ ಇದ್ದ ಬ್ಯಾಗ್ ತೆರೆದಿದ್ದನು. ಅದರಲ್ಲಿನ ಸುಮಾರು 10 ಒಡವೆ ಬಾಕ್ಸ್ ತೆಗೆದು ಇವು ಡೈಮಂಡ್ ಹರಳುಗಳು. ಅವುಗಳ ಮಾರುಕಟ್ಟೆ ಬೆಲೆ ಸುಮಾರು ₹10 ಕೋಟಿ ಆಗುತ್ತದೆ ಎಂದಿದ್ದಾನೆ. ಎರಡು ಮೆಷಿನ್ಗಳಿಂದ ಆ ಹರಗಳುಗಳನ್ನು ತಪಾಸಣೆ ಮಾಡಿ ಇವು ಅಸಲಿ ವಜ್ರದ ಹರಳುಗಳು ಎಂದಿದ್ದಾನೆ. ನೀವು ಒಪ್ಪಿಕೊಂಡರೆ ಸುಮಾರು 1ರಿಂದ 3 ಕೋಟಿ ರೂ.ಗೆ ಮಾರಾಟ ಮಾಡುವುದಾಗಿ ತಿಳಿಸಿದ್ದಾನೆ.
ಈ ವೇಳೆ ಲಕ್ಷ್ಮೀನಾರಾಯಣ ಅವರು ತಮ್ಮ ಸ್ನೇಹಿತರ ಜತೆಗೆ ಹರಳು ಪರಿಶೀಲಿಸಿದಾಗ ನಕಲಿ ಹರಳುಗಳು ಎಂಬ ಮಾಹಿತಿ ತಿಳಿಯುತ್ತಿದ್ದಂತೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ತೆರಳಿ, ರವಿ ಸೇರಿ ನಾಲ್ವರ ವಿರುದ್ಧ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.