ಬೆಂಗಳೂರು: ರಾಮನವಮಿ ಮುಗಿಸಿಕೊಂಡು ಕಾರಿನಲ್ಲಿ ಹೋಗುತ್ತಿದ್ದವರನ್ನ ಅಡ್ಡಗಟ್ಟಿ ಅನ್ಯಕೋಮಿನ ಯುವಕರು ಪುಂಡಾಟ ಮೆರೆದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದ ಬೆಟ್ಟಳ್ಳಿ ಮಸೀದಿ ಬಳಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾರಣ್ಯಪುರ ಠಾಣೆ ಪೊಲೀಸರು ಓರ್ವ ಅಪ್ರಾಪ್ತ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಫರ್ಮಾನ್, ಸಮೀರ್ ಹಾಗೂ ಓರ್ವ ಅಪ್ರಾಪ್ತ ಎಂದು ಗುರುತಿಸಲಾಗಿದ್ದು. ಈ ಮೂವರನ್ನು ವಿಚಾರಣೆ ನಡೆಸಲಾಗುತ್ತಿದೆ.
ಮೂವರು ಯುವಕರು ಕಾರಿನಲ್ಲಿ ಹೋಗುವಾಗ ಬಾವುಟ ಹಿಡಿದುಕೊಂಡು ಜೈ ಶ್ರೀರಾಮ್ ಅಂದಿದ್ದಾರೆ. ಈ ವೇಳೆ ಇಬ್ಬರು ಯುವಕರು ಕಾರು ಅಡ್ಡಗಟ್ಟಿದ್ದಾರೆ. ಜೈ ಶ್ರೀರಾಮ್ ಎಂದು ಯಾಕೆ ಕೂಗ್ತಿರಾ, ಅಲ್ಲಾ ಅನ್ನಿ ಎಂದು ಗಲಾಟೆ ಮಾಡಿದ್ದಾರೆ. ಗಲಾಟೆ ಮಾಡಿ ಮತ್ತಷ್ಟು ಯುವಕರನ್ನು ಕರೆತಂದಿದ್ದಾರೆ. ಈ ವೇಳೆ ಅಲ್ಲಿಗೆ ಬಂದವರು ಸೇರಿಕೊಂಡು ಕಾರಿನಲ್ಲಿದ್ದ ಮೂವರು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ಕುರಿತು ಐಪಿಸಿ ಸೆಕ್ಷನ್ 295a, 298, 143, 147, 504,324, 326, 149, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.