ಬೆಂಗಳೂರು: ಕರ್ನಾಟಕ ಸರ್ಕಾರವು 17,835.9 ಕೋಟಿ ರೂ. ಮೌಲ್ಯದ ಆರು ಹೊಸ ಯೋಜನೆಗಳು ಮತ್ತು ಹೆಚ್ಚುವರಿ ಬಂಡಾವಳ ಹೂಡಿಕೆಯ ಎಂಟು ಯೋಜನೆಗಳಿಗೆ ಒಮ್ಮತದಿಂದ ಒಪ್ಪಿಗೆಯನ್ನು ಸೂಚಿಸಿದೆ.ಇದರಿಂದ ರಾಜ್ಯದಲ್ಲಿ 27,000 ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಅನುಮೋದನಾ ಸಮಿತಿ (ಎಸ್ಹೆಚ್ಎಲ್ಸಿಸಿ) ಸಭೆಯಲ್ಲಿ ಅನುಮೋದನೆ ನೀಡಲಾಯಿತು.
8,220.05 ಕೋಟಿ ರೂ. ಮೌತ್ತದ ಆರು ಹೊಸ ಯೋಜನೆಗಳಿಗೆ ಮತ್ತು 9,615.85 ಕೋಟಿ ರೂ. ಮೊತ್ತದ ಹೆಚ್ಚುವರಿ ಬಂಡವಾಳ ಹೂಡಿಕೆಯ ಎಂಟು ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಕೋಲಾರ ಜಿಲ್ಲೆಯ ನರಸಾಪರ ಕೈಗಾರಿಕಾ ಪ್ರದೇಶದಲ್ಲಿ ವಿಸ್ಟ್ರಾನ್ ಇನ್ಫೋಕಾಂ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಪ್ರವೇಟ್ ಲಿಮಿಟೆಡ್ 2,095 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ಫೋನ್ ತಯಾರಿಕಾ ಘಟಕ ಆರಂಭವಾಗಲಿದ್ದು, 21,723 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ಹೊಸದಾಗಿ ಬಂಡವಾಳ ಹೂಡಿಕೆ ಮಾಡಲು ಎಸ್ಟಿಟಿ ಗ್ಲೋಬಲ್ ಡಾಟಾ ಸೆಂಟರ್ಸ್ ಇಂಡಿಯಾ ಲಿಮಿಟೆಡ್ 1,750 ಕೋಟಿ ರೂ., ಇಂಡಿಯನ್ ಕೇನ್ ಪವರ್ ಲಿಮಿಟೆಡ್ 1,078 ಕೋಟಿ ರೂ., ಐಸಿಟಿ ಸರ್ವಿಸ್ ಮ್ಯಾನೇಜ್ಮೆಂಟ್ ಸೊಲ್ಯೂಷನ್ಸ್ 1,450 ಕೋಟಿ ರೂ. ಮತ್ತು ಶ್ರೀ ಬಾಲಾಜಿ ಷುಗರ್ಸ್ ಮತ್ತು ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಏರ್ ಇಂಡಿಯಾ ಲಿಮಿಟೆಡ್ ಹೂಡಿಕೆ ಮಾಡಲಿವೆ ಎನ್ನಲಾಗುತ್ತಿದೆ.