ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮೂರು ದಿನ ಬಾಕಿ ಇರುವಾಗ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನಾ ಅವರು ತಮಗೆ ರಾಜ್ಯಸಭೆ ಟಿಕೆಟ್ ಬೇಡ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಜೂನ್ 10 ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ನಿರ್ಮಲ ಕುಮಾರ್ ಸುರಾನ ಅವರನ್ನು ರಾಜ್ಯಸಭೆಯ ಅಭ್ಯರ್ಥಿಯನ್ನಾಗಿ ಪರಿಗಣಿಸುವಂತೆ ಶಿಫಾರಸ್ಸು ಮಾಡಿ ಕಳುಹಿಸಲಾಗಿತ್ತು.
ಆದರೆ, ಪಕ್ಷದಲ್ಲಿ ತಮಗೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಕೆಲಸದ ಒತ್ತಡ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ತಮಗೆ ರಾಜ್ಯಸಭೆಯ ಟಿಕೆಟ್ ಬೇಡ ಎಂದು ನಿರ್ಮಲ್ ಕುಮಾರ್ ಸುರಾನ ತಿಳಿಸಿದ್ದಾರೆ.
ರಾಜ್ಯಸಭೆಗೆ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ರಾಜ್ಯ ವಿಧಾನ ಸಭೆಯಲ್ಲಿ ಪಕ್ಷಗಳ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ಇಬ್ಬರು ಹಾಗೂ ಕಾಂಗ್ರೆಸ್ನಿಂದ ಒಬ್ಬರನ್ನು ಆಯ್ಕೆ ಮಾಡಲು ಅವಕಾಶವಿದೆ. ನಾಲ್ಕನೇ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮೂರು ಪಕ್ಷಗಳಲ್ಲಿ ಸಂಖ್ಯಾಬಲದ ಕೊರತೆ ಇದೆ.
ರಾಜ್ಯಸಭೆಗೆ ಆಯ್ಕೆಯಾಗಲು ಒಬ್ಬ ಅಭ್ಯರ್ಥಿಗೆ ಕನಿಷ್ಠ 45 ಮತಗಳು ಅಗತ್ಯವಿದೆ. ಆಡಳಿತ ಪಕ್ಷ ಬಿಜೆಪಿಯ ಬಳಿ 120 (ಸ್ಪೀಕರ್ ಸೇರಿ) ಸದಸ್ಯರಿದ್ದು, ಬಿಎಸ್ಪಿಯಿಂದ ಆಯ್ಕೆಯಾಗಿರುವ ಎನ್.ಮಹೇಶ್ ಹಾಗೂ ಪಕ್ಷೇತರರಾಗಿ ಆಯ್ಕೆಯಾಗಿರುವ ಎಚ್. ನಾಗೇಶ್ ಅವರೂ ಪಕ್ಷದ ಜತೆ ಗುರುತಿಸಿ ಕೊಂಡಿದ್ದರಿಂದ ಬಿಜೆಪಿಯಲ್ಲಿ ಇಬ್ಬರಿಗೆ 90 ಮತಗಳನ್ನು ಹಾಕಿದ ಬಳಿಕ 32 ಮತಗಳು ಉಳಿಯಲಿವೆ. 3ನೇ ಅಭ್ಯರ್ಥಿಯನ್ನು ಗೆಲ್ಲಿಸಲು ಬಿಜೆಪಿಗೆ 13 ಮತಗಳ ಕೊರತೆಯಾಗಲಿದ್ದು, ಅದನ್ನು ಜೆಡಿಎಸ್ ಶಾಸಕರಿಂದ ಪಡೆಯುವ ಲೆಕ್ಕಾಚಾರ ಬಿಜೆಪಿ ನಾಯಕರದ್ದಾಗಿದೆ.