ಬೆಂಗಳೂರು : ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟುಬಿದ್ದು ಕನ್ನಡ ಚಿತ್ರರಂಗದ ನಿರ್ಮಾಪಕ ಬಾಲ್ರಾಜ್ ಅಲಿಯಾಸ್ ಆನೇಕಲ್ ಬಾಲ್ರಾಜ್ (58) ಮೃತಪಟ್ಟಿರುವ ದುರ್ಘಟನೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಗೌರವ್ನಗರದಲ್ಲಿ ನಡೆದಿದೆ.
ಇಂದು ಬೆಳಗ್ಗೆ 8 ಗಂಟೆ ಸಮಯದಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ವಾಕಿಂಗ್ಗೆ ಹೋಗಲು ರಸ್ತೆ ದಾಟುವಾಗ ಪಲ್ಸರ್ ಬೈಕ್ನಲ್ಲಿ ವೇಗವಾಗಿ ಬಂದ ವ್ಯಕ್ತಿ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಬಾಲ್ರಾಜ್ ಅವರು ಕೆಳಗೆ ಉರುಳಿಬಿದ್ದ ಪರಿಣಾಮ ಫುಟ್ಪಾತ್ನ ಕಲ್ಲು ಅವರ ತಲೆಗೆ ಬಡಿದಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣ ಸ್ಥಳೀಯರು ಜೆ.ಪಿ.ನಗರದ ಸಾಗರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೋಗಿ ಪ್ರೇಮ್ ನಿರ್ದೇಶನದ ನಟ ದರ್ಶನ್ ಅಭಿಯನದ ಕರಿಯಾ ಚಿತ್ರ ನಿರ್ಮಾಣದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಬಾಲ್ರಾಜ್ ಅವರು ಗಣಪ, ಬಕ್ರ್ಲಿ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸುಮಾರು 25 ವರ್ಷಗಳಿಂದ ಗಾಂನಗರದಲ್ಲಿ ನಿರ್ಮಾಪಕರಾಗಿ, ವಿತರಕರಾಗಿಯೂ ಕೂಡ ಕಾರ್ಯ ನಿರ್ವಹಿಸಿದ್ದರು. ಆನೇಕಲ್ ಬಾಲ್ರಾಜ್ ಎಂದೇ ಹೆಸರುವಾಸಿಯಾಗಿದ್ದರು.
ಬಾಲ್ರಾಜ್ ಅವರ ಪುತ್ರ ಸಂತೋಷ್ ಕೂಡ ನಾಯಕ ನಟರಾಗಿದ್ದು, ಕೆಂಪ, ಕರಿಯಾ-2 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲ್ರಾಜ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರಾದ ಸಾ.ರಾ.ಗೋವಿಂದು, ಜಯರಾಜ್, ಸುನೀಲ್ಪುರಾಣಿಕ್, ನಟ ದರ್ಶನ್ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.