ಬೆಂಗಳೂರು: ಕರ್ನಾಟಕ ದೇಶದಲ್ಲಿಯೇ ಅತ್ಯಂತ ಕ್ರಿಯಾಶೀಲ ರಾಜ್ಯವಾಗಿದ್ದು, ಹಲವು ಹೊಸತನಗಳ ಮತ್ತು ನವೋದ್ಯಮಗಳ ಉಗಮ ಸ್ಥಾನವಾಗಿದ್ದು, ಭಾರತದ ಬಯೋಟೆಕ್ನಾಲಜಿಯ ರಾಜಧಾನಿ ಬೆಂಗಳೂರು ಆಗಿದೆ ಎಂದು ಕೇಂದ್ರ ಜವಳಿ, ಗ್ರಾಹಕರ ವ್ಯವಹಾರ, ಆಹಾರ ಹಾಗೂ ನಾಗರೀಕ, ಕೈಗಾರಿಕೆ ಹಾಗೂ ವಾಣಿಜ್ಯ ಸಚಿವರಾದ ಪಿಯೂಷ್ ಗೋಯಲ್ ಅವರು ಹರ್ಷ ವ್ಯಕ್ತಪಡಿಸಿದರು.
ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಆವರಣದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಉದ್ಯಮ ಹಾಗೂ ನವೋದ್ಯಮ ಪ್ರತಿನಿಧಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿ ಜಾಗತಿಕ ಮಹಾಮಾರಿ ಕೋವಿಡ್ ನಿಯಂತ್ರಣಕ್ಕಾಗಿ ಭಾರತ್ ಬಯೋಟೆಕ್ನಾಲಜಿಯಂತಹ ಸಂಸ್ಥೆಯ ಕೊಡುಗೆ ಅಪಾರ, ದೇಶದ ಆರ್ಥಿಕ ಅಭಿವೃದ್ಧಿಗಾಗಿ ಬೆಂಗಳೂರು ನವೋದ್ಯಮದ ಮೂಲಕ ತನ್ದೇ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಸರ್ಕಾರದ ಮಟ್ಟದಲ್ಲಿ ದೇಶದ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಂತಹ ಸಂವಾದಗಳು ಸಹಾಯವಾಗುತ್ತವೆ, ಇಲ್ಲಿನ ಸಂವಾದದ ಸಾರಂಶದ ಅಂಶಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಖಾಸಗಿ ಸಂಸ್ಥೆಗಳ ಮುಖ್ಯಸ್ಥರು ನವದೆಹಲಿಗೆ ಬೇಟಿ ನೀಡಿ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹಂಚಿಕೊಳ್ಳಲು ಅವಕಾಶವಿದೆ. ಕೋವಿಡ್ ಸಮಯದಲ್ಲಾದ ಆರ್ಥಿಕ ತಲ್ಲಣಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಉದ್ಯಮಗಳ ಉಳಿವಿಗಾಗಿ ಹಾಗೂ ಬೆಳವಣಿಗೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನವೋದ್ಯಮಿಗಳ ಪ್ರೋತ್ಸಾಹಕ್ಕೆ ಸರ್ಕಾರ ಬದ್ಧವಗಿದೆ ಎಂದು ಹೇಳಿದರು.
ನೇರವಾಗಿ ವಿವಿಧ ಕ್ಷೇತ್ರದ ಉದ್ಯಮಿಗಳ ಜೊತೆ ನಡೆಸುವ ಈ ರೀತಿಯ ಸಂವಾದಗಳು ಸರ್ಕಾರದ ಮಟ್ಟದಲ್ಲಿ ಹೊಸ ಕಾನೂನು ಹಾಗೂ ಯೋಜನೆಗಳನ್ನು ರೂಪಿಸುವಲ್ಲಿ ಸಹಾಯಕವಾಗುತ್ತವೆ. ಇಂದಿನ ಸಂವಾದದಲ್ಲಿ ಕೆಲವು ಸಂಸ್ಥೆಗಳ ಮುಖ್ಯಸ್ಥರು ನೀಡಿದ ಸಲಹೆಗಳನ್ನು ಮತ್ತು ಸಮಸ್ಯೆಗಳನ್ನು ತಮಗೆ ನೇರವಾಗಿ ಪತ್ರ ಬರೆಯುವ ಮೂಲಕ ಪರಿಹಾರ ಕಂಡುಕೊಳ್ಳಲು ತಿಳಿಸಿದರು ಹಾಗೂ ಸಂಬಂಧ ಪಟ್ಟ ಇತರೆ ಇಲಾಖೆಗಳೊಂದಿಗೆ ತಾವು ಮಾತುಕತೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಿಕೊಡುವುದಾಗಿ ಭರವಸೆ ನೀಡಿದರು
ಸಂವಾದದದಲ್ಲಿ ಮಾಹಿತಿ ತಂತ್ರಜ್ಞಾನದ ರಾಜ್ಯ ಸರ್ಕಾರದ ಕಾರ್ಯದರ್ಶಿ ರಮಣ ರೆಡ್ಡಿ, ಕೇಂದ್ರ ಸರ್ಕಾರದ ಹಿರಿಯ ಅಧಿಕಾಗಳು ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿ ಮೀನಾ ನಾಗರಾಜ್, ಇನ್ ಫೋಸಿಸ್ ಸಂಸ್ಥೆಯ ಸ್ಥಾಪಕ ಸದಸ್ಯ ಕ್ರಿಸ್ ಗೋಪಾಲ್ ಸೇರಿದಂತೆ ಹಲವಾರು ಖಾಸಗಿ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.