ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದಲೂ ಭಾರೀ ಮಳೆಯಾಗುತ್ತಿದ್ದು, ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ.
ಹಲವೆಡೆ ಈಗಲೂ ಮಳೆ ಸುರಿಯುತ್ತಿದ್ದು , ಬೆಂಗಳೂರು ಏರ್ಪೋರ್ಟ್ ಮುಖ್ಯರಸ್ತೆಗಳು ಜಲಾವೃತಗೊಂಡಿವೆ. ಏರ್ಪೋರ್ಟ್ ತಲುಪಲು ಪ್ರಯಾಣಿಕರು ಒದ್ದಾಡಿದ್ದು, ಎಷ್ಟೋ ಮಂದಿ ಫ್ಲೈಟ್ ಮಿಸ್ ಮಾಡಿಕೊಂಡಿದ್ದಾರೆ.
ಏರ್ಪೋರ್ಟ್ ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಂ ಉಂಟಾಗಿದ್ದು, ಜನ ತೊಂದರೆ ಅನುಭವಿಸಬೇಕಾಯ್ತು. ಬೆಂಗಳೂರಿನ ಬಹುತೇಕ ರಸ್ತೆಗಳು, ಅಂಡರ್ಪಾಸ್ಗಳಲ್ಲಿ ನೀರು ತುಂಬಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಭಾರೀ ಮಳೆಗೆ ಜನ ತತ್ತರಿಸಿದ್ದು, ಮೆಜೆಸ್ಟಿಕ್ನಲ್ಲಿ ಗುಂಪುಗುಂಪಾಗಿ ಜನ ನಿಂತು ಮನೆಗೆ ಹೋಗಲಾರದೆ ಪರದಾಡಿದ್ದಾರೆ.
ಶಾಂತಿನಗರ,ಮೆಜೆಸ್ಟಿಕ್, ಕೋರಮಂಗಲ, ಜೆ.ಪಿ.ನಗರ,ರಾಜಾಜಿನಗರ, ಆಡುಗೋಡಿ ರಿಚ್ಮಂಡ್ ಸರ್ಕಲ್, ವಿಧಾನಸೌಧ, ಯಶವಂತಪುರ, ವಿಜಯನಗರ,ವಿಲ್ಸನ್ ಗಾರ್ಡನ್ ಸೇರಿ ಏರ್ಪೋರ್ಟ್ ತೆರಳುವ ಮುಖ್ಯ ರಸ್ತೆಗಳಲ್ಲಿ ಭಾರೀ ಮಳೆಯಾಗಿದೆ.
ಭಾರೀ ಮಳೆಯಿಂದಾಗಿ ಶೇಷಾದ್ರಿಪುರಂನಲ್ಲಿ ಮರ ಧರೆಗುರುಳಿದೆ. ರಸ್ತೆಗೆ ಅಡ್ಡಲಾಗಿ ಮರ ಉರುಳಿಬಿದ್ದಿರುವ ಪರಿಣಾಮ ಟ್ರಾಫಿಕ್ ಜಾಂ ಆಗಿದೆ. ಮಂತ್ರಿಮಾಲ್ ಬಳಿಯ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.