ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವೋಸ್ ಪ್ರವಾಸ ಕೈಗೊಂಡಿದ್ದಾರೆ. ಹೋಗುವ ಮೊದಲು ಬೆಂಗಳೂರಿಗೆ ಅಷ್ಟ ದಿಕ್ಪಾಲಕರ ನೇಮಕ ಮಾಡಿದ್ದಾರೆ.
ಭಾರೀ ಮಳೆ ಹಿನ್ನೆಲೆ ಸಿಎಂ ಬೊಮ್ಮಾಯಿ ಟಾಸ್ಕ್ ಫೋರ್ಸ್ ರಚಿಸಿದ್ದಾರೆ. ವಲಯವಾರು ವಿಂಗಡಣೆ ಮಾಡಿ ಆಯಾ ವಲಯಕ್ಕೆ ಸಚಿವರ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ರಚಿಸಿ ಆದೇಶ ಹೊರಡಿಸಿದ್ದಾರೆ.
ಮಳೆ ಅನಾಹುತ, ಸಮಸ್ಯೆ ಎದುರಿಸಲು ಸಚಿವರ ನೇಮಕ ಮಾಡಲಾಗಿದ್ದು, ಬೊಮ್ಮಾಯಿ 8 ವಲಯಗಳಿಗೆ ಟಾಸ್ಕ್ ಫೋರ್ಸ್ ರಚಿಸಿದ್ದಾರೆ. ದಕ್ಷಿಣ ವಲಯಕ್ಕೆ ಕಂದಾಯ ಸಚಿವ ಆರ್.ಅಶೋಕ್, ಪೂರ್ವ ವಲಯಕ್ಕೆ ಡಾ. ಅಶ್ವತ್ಥ್ ನಾರಾಯಣ, ಪಶ್ಚಿಮ ವಲಯಕ್ಕೆ ವಸತಿ ಸಚಿವ ವಿ.ಸೋಮಣ್ಣ, ಆರ್. ಆರ್ ನಗರ ವಲಯಕ್ಕೆ S.T ಸೋಮಶೇಖರ್, ಮಹದೇವಪುರ ವಲಯಕ್ಕೆ ಬೈರತಿ ಬಸವರಾಜ್, ಬೊಮ್ಮನಹಳ್ಳಿ ವಲಯಕ್ಕೆ ಕೆ. ಗೋಪಾಲಯ್ಯ, ಯಲಹಂಕ, ದಾಸರಹಳ್ಳಿ ವಲಯಕ್ಕೆ ಮುನಿರತ್ನ ನೇಮಕ ಮಾಡಿದ್ದಾರೆ.
ಬೆಂಗಳೂರಿನ ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳ ರಚನೆ ಮಾಡಲಾಗಿದ್ದು, ಟಾಸ್ಕ್ ಫೋರ್ಸ್ನಲ್ಲಿ ಶಾಸಕರು, ಸಂಸದರಿರುತ್ತಾರೆ. ಇದರಲ್ಲಿ ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ, ವಲಯಗಳ ಜಂಟಿ ಆಯುಕ್ತರು ಸಂಚಾಲಕರಾಗಿ ಕಾರ್ಯ ನಿರ್ವಹಣೆ ಯಾಗಲಿದೆ.
ಸೂಕ್ತ ಕ್ರಮ ಕೈಗೊಳ್ಳಲು ಡಿಸಿಗಳಿಗೆ ಸೂಚನೆ:
ಕಳೆದ ವಾರದಿಂದ ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕರುನಾಡು ತತ್ತರಿಸಿದ್ದು, ಬೆಳೆದಿದ್ದ ಬೆಳೆಗಳು ಹಾನಿಗೀಡಾಗುವ ಮೂಲಕ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಈ ನಡುವೆ ಜನ-ಜೀವನದ ಮೇಲೂ ಭಾರೀ ಪರಿಣಾಮ ಬೀರಿದೆ.
ಮಾನ್ಸೂನ್ ಮುನ್ನವೇ ಸುರಿದಿರುವ ಮಳೆಯಿಂದಾದ ಆಗು-ಹೋಗುಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶನಿವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದರು.
ಗೃಹ ಕಚೇರಿ ಕೃಷ್ಣಾದಿಂದ ವೀಡಿಯೋ ಕಾನ್ಪೆರೆನ್ಸ್ ಮೂಲಕ ಸಭೆ ನಡೆಸಿದ ಮುಖ್ಯಮಂತ್ರಿಗಳು, ರಾಜ್ಯದ ಮಳೆಯ ಪರಿಸ್ಥಿತಿ ಕುರಿತು ಅವಲೋಕಿಸಲಾಗಿದ್ದು, ಹಾನಿಗೀಡಾದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.
ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ, ಮಳೆಯಿಂದ ಆಗಿರುವ ಹಾನಿ, ಹಾನಿಗೆ ಕೈಗೊಂಡ ಪರಿಹಾರ ಕಾರ್ಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೇ ಬೇರೆ ರಾಜ್ಯಗಳಲ್ಲಿ ಸುರಿಯುತ್ತಿರುವ ಮಳೆ, ಮುಂದಿನ ಮುಂಗಾರು ಮಳೆಗೆ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮಾಲೋಚಿಸಿದ ಮುಖ್ಯಮಂತ್ರಿ ಶೀಘ್ರದಲ್ಲೇ ಸಿದ್ಧತೆ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
ಕಂದಾಯ ಸಚಿವ ಆರ್. ಅಶೋಕ್, ವಸತಿ ಸಚಿವ ವಿ. ಸೋಮಣ್ಣ, ಇಂಧನ ಸಚಿವ ಸುನಿಲ್ ಕುಮಾರ್ ಭಾಗಿಯಾಗಿದ್ದರು.