ನಾಗನಕೆರೆ: ಗಿಡದ ಜಾತ್ರೆ ಎಂದಾಕ್ಷಣವೇ ಅಚ್ಚರಿಯಾಗುವುದು ಸಹಜ.. ಇದ್ಯಾವ ಜಾತ್ರೆ ಎಂಬ ಪ್ರಶ್ನೆಯೊಂದು ಮನದಲ್ಲಿ ಮೂಡುತ್ತದೆ. ಈ ಜಾತ್ರೆ ನಿಜಕ್ಕೂ ಅಪರೂಪದ ಜಾತ್ರೆ… ಪ್ರತಿ ವರ್ಷವೂ ಡಿಸೆಂಬರ್ ತಿಂಗಳಲ್ಲಿ ನಡೆಯುತ್ತದೆ. ಇಷ್ಟಕ್ಕೂ ಗಿಡದ ಜಾತ್ರೆ ಎಂದರೇನು? ಎಲ್ಲಿ ಮತ್ತು ಹೇಗೆ ನಡೆಯುತ್ತದೆ ಎಂಬುದನ್ನು ನೋಡುತ್ತಾ ಹೋದರೆ ಒಂದಷ್ಟು ಮಾಹಿತಿಗಳು ಲಭ್ಯವಾಗುತ್ತವೆ.
ಈ ಜಾತ್ರೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಿಂದ ಕೇವಲ 10ಕಿ.ಮೀ. ದೂರದಲ್ಲಿರುವ ದೇವಲಾಪರ ನಾಗನಕೆರೆಯಲ್ಲಿ ನಡೆಯುತ್ತದೆ. ಜಾತ್ರೆಯ ದಿನದಂದು ಇಲ್ಲಿಗೆ ಹೋಗಿದ್ದೇ ಆದರೆ ನಾವು ಅಂದುಕೊಳ್ಳುವ ಜಾತ್ರೆಯ ವೈಭವ ಕಾಣಿಸುವುದಿಲ್ಲ. ಬದಲಿಗೆ ಕೆರೆಯ ದಡದಲ್ಲಿ ಪೂಜಾ ಕೈಂಕರ್ಯ ನೆರವೇರಿಸುವ ಭಕ್ತರು ಮತ್ತು ತಿರುಪತಿ ತಿಮ್ಮಪ್ಪನ ಸ್ಮರಿಸುವ ದಾಸರು ಕಾಣಿಸುತ್ತಾರೆ. ಅದರಾಚೆಗೆ ದೇವರಿಗೆ ಮಾಂಸ ಮತ್ತು ಮದ್ಯವನ್ನು ನೈವೇದ್ಯವಾಗಿಟ್ಟು ಪೂಜಿಸುವುದು ಕಾಣಿಸುತ್ತದೆ.
ಜಾತ್ರೆ ನಡೆಯುವ ಸ್ಥಳವನ್ನು ಚಿಕ್ಕ ತಿರುಪತಿ ಎಂದು ಕೂಡ ಕರೆಯಲಾಗುತ್ತದೆ. ಈ ಜಾತ್ರೆಗೆ ಜಿಲ್ಲೆಯವರು ಮಾತ್ರವಲ್ಲದೆ ಹೊರಗಿನವರು ಬರುತ್ತಾರೆ. ಎಲ್ಲರೂ ಒಂದೆಡೆ ಸೇರಿ ತಿಮ್ಮಪ್ಪನನ್ನು ಸ್ಮರಿಸಿ, ಪೂಜೆ ಮಾಡಿ ಹರಕೆ ಸಲ್ಲಿಸುತ್ತಾರೆ. ಇನ್ನು ಬೇರೆಡೆಗಳಿಂದ ಜಾತ್ರೆಗೆ ಆಗಮಿಸುವ ಭಕ್ತರಾದ ದಾಸರು ತಮ್ಮ ಜೋಳಿಗೆಯಲ್ಲಿ ದೇವರನ್ನು ತಂದು ನಾಗನಕೆರೆ ದಡದ ಗಿಡದ ಪ್ರದೇಶದಲ್ಲಿಟ್ಟು ಪೂಜಿಸುತ್ತಾರೆ. ಹೀಗೆ ಗಿಡದ ಪ್ರದೇಶದಲ್ಲಿಟ್ಟು ಪೂಜಿಸುವ ಸಂಪ್ರದಾಯವಿರುವುದರಿಂದ ಗಿಡದಜಾತ್ರೆ ಎಂಬ ಹೆಸರು ಹುಟ್ಟಿಕೊಂಡಿರಬಹುದೇನೋ?
ಇನ್ನು ಜಾತ್ರೆಗೆ ಬರುವ ಭಕ್ತರು ಎಡೆಯಿಟ್ಟ ಬಳಿಕ ಬೋಜನ ಸ್ವೀಕರಿಸಿ ಹಿಂತಿರುಗುತ್ತಾರೆ. ಇದು ಹರಕೆಯಾಗಿರುವುದರಿಂದ ಹರಕೆ ತೀರಿಸಲೆಂದೇ ಜನ ಬರುತ್ತಾರೆ. ಈ ಬಾರಿ ಜಾತ್ರೆಯನ್ನು ಡಿಸೆಂಬರ್ 24ರಂದು ನಡೆಸಲಾಗುತ್ತಿದ್ದು, ಕೊರೊನಾ ಸೋಂಕು ಇರುವ ಕಾರಣ ಸರಳವಾಗಿ ಆಚರಣೆ ನಡೆಯುತ್ತಿದೆ.