ಬೆಂಗಳೂರು : ಬೊಮ್ಮನಹಳ್ಳಿ ವಾರ್ಡ್ ವ್ಯಾಪ್ತಿಯ ಎಚ್ಎಚ್ಆರ್ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿ ಭಾಗ ನೆಲಕ್ಕುರಳಿದೆ. ಮೇ 8ರಂದು ಸಂಜೆ ಬೀಸಿದ ಬಿರುಗಾಳಿ ಮಳೆಗೆ ಕ್ರೀಡಾಂಗಣದ ಗ್ಯಾಲರಿ ಒಂದು ಭಾಗ ಧರೆಗುರುಳಿದ್ದರೆ, ಇನ್ನೊಂದು ಭಾಗ ಮುರಿದು ಹೋಗಿದೆ.
ಸುಮಾರು 50 ಕೋಟಿ ರು ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ 3.5 ಕೋಟಿ ರು ವೆಚ್ಚದ ಕಾಮಗಾರಿಯನ್ನು ಮಾರ್ಚ್ 1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದರು.
ಈ ಕ್ರೀಡಾಂಗಣದ ವ್ಯಾಪ್ತಿಯಲ್ಲಿರುವ ಒಳಾಂಗಣ ಸ್ಟೇಡಿಯಂ ಸುಮಾರು ನಾಲ್ಕು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಬಿಬಿಎಂಪಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಕ್ರೀಡಾಂಗಣ ಮಳೆಗೆ ಹಾನಿಗೊಂಡಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.
ಲೋಕಾರ್ಪಣೆಗೊಂಡ ಭಾಗವು ಎರಡೇ ತಿಂಗಳಲ್ಲಿ ನೆಲ ಸಮವಾಗಿದ್ದು, ಸುಮಾರು 4 ಕೋಟಿ ರೂ ನಷ್ಟ ಅಂದಾಜಿಸಲಾಗಿದೆ. ಕ್ರೀಡಾಂಗಣದ ಒಂದು ಗ್ಯಾಲರಿ ಮರಗಳಲ್ಲಿ ಸಿಲುಕ್ಕಿದ್ದರೆ, ಮತ್ತೊಂದು ಗ್ಯಾಲರಿ ಧರೆಗುರುಳಿದೆ. ಗ್ಯಾಲರಿ ಹಿಂಭಾಗದಲ್ಲಿ ನಿಲ್ಲಿಸಿದ್ದ ವಾಹನಗಳು ಮೇಲೂ ಕಬ್ಬಿಣದ ಸರಳುಗಳು ಬಿದ್ದಿವೆ. ಗಾಳಿ ಮಳೆಗೆ ಗ್ರಾನೈಟ್ ಸಮೇತ ಸ್ಲ್ಯಾಬ್ ಗಳು ಕಿತ್ತು ಹೋಗಿವೆ. ಭಾರಿ ಮರಗಳಿಲ್ಲದಿದ್ದರೆ, ಗಾಳಿ ಮಳೆಯಿಂದ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಈ ದುರ್ಘಟನೆ ಜೊತೆಗೆ ಮರದ ಕೊಂಬೆ ಉರುಳಿದ್ದು, ಅದರಲ್ಲಿ ಗೂಡು ಕಟ್ಟಿದ್ದ ಹದ್ದು ಕೂಡಾ ಗಾಯಗೊಂಡಿದೆ ಎಂದು ತಿಳಿದು ಬಂದಿದೆ.
ಬೊಮ್ಮನಹಳ್ಳಿ ವಾರ್ಡ್ ಕಾರ್ಪೊರೇಟರ್ ಮೋಹನ್ ರಾಜು ಅವರು ಆಸಕ್ತಿವಹಿಸಿ ಕಸದ ಕ್ವಾರಿಯಾಗಿದ್ದ ಜಾಗವನ್ನು ಕ್ರೀಡಾಂಗಣವನ್ನಾಗಿ ಪರಿವರ್ತಿಸಿದ್ದರು. ಬ್ಯಾಸ್ಕೆಟ್ ಬಾಲ್, ಸ್ಕೇಟಿಂಗ್ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಈ ಕ್ರೀಡಾಂಗಣದ ನಿರ್ಮಾಣ ಕಾಮಗಾರಿಯನ್ನು ಆಂಧ್ರ ಮೂಲದ ಗುತ್ತಿಗೆದಾರ ಶಶಿಕುಮಾರ್ ಅವರು ಬಿಬಿಎಂಪಿಯಿಂದ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.