ಹಾವೇರಿ: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಪಡಿತರ ಚೀಟಿದಾರರಿಗೆ ಮೇ-2022ಮೇಗೆ ಪೋಷಕಾಂಶಯುಕ್ತ ಬಲವರ್ಧಿತ ಅಕ್ಕಿಯನ್ನು ಸರ್ಕಾರದಿಂದ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಹಾವೇರಿ ತಹಶೀಲ್ದಾರ ಎನ್.ಬಿ.ಗೆಜ್ಜಿ ಅವರು ತಿಳಿಸಿದ್ದಾರೆ.
ಅಂತ್ಯೋದಯ ಪಡಿತರ ಚೀಟಿ ಹೊಂದಿದ ಪ್ರತಿ ಪಡಿತರ ಚೀಟಿಗೆ ಉಚಿತವಾಗಿ 15 ಕೆ.ಜಿ.ಜೋಳ ಹಾಗೂ 20 ಕೆಜಿ ಅಕ್ಕಿ ಮತ್ತು ಪಿಎಂಕೆಎವೈ ಯೋಜನೆಯಡಿ ಉಚಿತವಾಗಿ ಪ್ರತಿ ಸದಸ್ಯರಿಗೆ 5 ಕೆ.ಜಿ.ಅಕ್ಕಿ ಬಿಡುಗಡೆ ಮಾಡಲಾಗಿದೆ.
ಪಿ.ಎಚ್.ಎಚ್. (ಬಿಪಿಎಲ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ಎನ್ಎಫ್ಎಸ್ಎ ಯೋಜನೆಯಡಿ ಉಚಿತವಾಗಿ 3ಕೆಜಿ ಅಕ್ಕಿ ಹಾಗೂ 2ಕೆ.ಜಿ. ಜೋಳ ವಿತರಿಸಲಾಗುವುದು. ಪಿಎಂಜಿಕೆಎವೈ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬಿಡುಗಡೆ ಮಾಡಿದೆ. ಗೋಧಿ ಹಂಚಿಕೆ ಇರುವುದಿಲ್ಲ.
ಎನ್.ಪಿ.ಎಚ್.ಎಚ್.(ಎಪಿಎಲ್) ಪಡಿತರ ಚೀಟಿ ಹೊಂದಿ ಒಪ್ಪಿಗೆ ನೀಡಿದ ಏಕ ಸದಸ್ಯರಿಗೆ 5 ಕೆ.ಜಿ. , ಎರಡು ಮತ್ತು ಎರಡಕ್ಕಿಂತ ಹೆಚ್ಚಿನ ಸದಸ್ಯರಿಗೆ 10 ಕೆ.ಜಿ. ಅಕ್ಕಿಯನ್ನು ಪ್ರತಿ ಕೆ.ಜಿಗೆ ರೂ.15ರಂತೆ ವಿತರಿಸಲಾಗುವುದು.
ಅಂತರ್ ರಾಜ್ಯ/ಅಂತರ್ ಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿವುದರಿಂದ ಯಾವುದೇ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಮೇಲ್ಕಾಣಿಸಿದಂತೆ ಪಡಿತರ ಆಹಾರಧಾನ್ಯವನ್ನು ಪಡೆಯಬಹುದು. ಒಂದು ವೇಳೆ ನ್ಯಾಯಬೆಲೆ ಅಂಗಡಿಯವರು ಮೇಲ್ಕಾಣಿಸಿದ ಪ್ರಮಾಣದಲ್ಲಿ ಪಡಿತರ ಆಹಾರಧಾನ್ಯ ವಿತರಣೆ ಮಾಡದಿದ್ದಲ್ಲಿ ತಹಶೀಲ್ದಾರ ಕಚೇರಿಗೆ ದೂರು ಸಲ್ಲಿಸಬಹುದು ಹಾಗೂ ಆಹಾರ ಇಲಾಖೆ ಸಹಾಯವಾಣಿ ಸಂಖ್ಯೆ 1967 ಗೆ ದೂರು ದಾಖಲಿಸಬಹುದು ಎಂದು ತಿಳಿಸಿದ್ದಾರೆ.