ಹುಬ್ಬಳ್ಳಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆಯ ಮೇಲಿನ ಕಲ್ಲು ತೂರಾಟ ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ್ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಬಂಜಾರ ಸಮೂದಾಯದ ಪ್ರತಿಭಟನೆ ವೇಳೆಯಲ್ಲಿ ಮನೆಯ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಕಲ್ಲು ತೂರಿದವರು ನಿಜವಾದ ಮೀಸಲಾತಿ ಬಗ್ಗೆ ಕಳಕಳಿ ಇದ್ದವರಲ್ಲ. ಒಳಮೀಸಲಾತಿ ಕೊರಚ, ಭೋವಿ – ವಡ್ಡರು ಶೇ.03 ರಷ್ಟು ಮೀಸಲಾತಿ ಕೇಳಿದ್ದರು. ಆದರೆ ಸರ್ಕಾರ ಅದಕ್ಕಿಂತಲೂ ಹೆಚ್ಚು ಮೀಸಲಾತಿ ಕೊಟ್ಟಿದೆ. ಎಡಗೈ ಮತ್ತು ಬಲಗೈ ಬೇಡಿಕೆಯಂತೆ ಒಳಮೀಸಲಾತಿ ಕೊಟ್ಟಿದ್ದೇವೆ. ನಮ್ಮ ಸರ್ಕಾರ ಜಾಣತನದ ನಡೆ ಅನುಸರಿಸಿದೆ ಎಂದರು.
ಜನರ ಅಪೇಕ್ಷೆಗೆ ತಕ್ಕಂತೆ ಚುನಾವಣೆಗೆ ಕೊಟ್ಟಿದ್ದೇವೆ. ಲಿಂಗಾಯಿತ ಸಮುದಾಯಕ್ಕೂ ಹೆಚ್ಚು ಮೀಸಲಾತಿ ಕೊಟ್ಟಿದೆ. ನಿಜವಾದ ಹೋರಾಟ ಮಾಡುತ್ತಿದ್ದವರಿಗೆ ಮೀಸಲಾತಿ ಖುಷಿಯಾಗಿದೆ. ಕಾಂಗ್ರೆಸ್ ನಾಯಕರಿಗೆ ಮಾತ್ರ ಕಸಿವಿಸಿಯಾಗಿದೆ ಎಂದು ತಿಳಿಸಿದರು.
ಅಂಚಟಗೇರಿ ಟಿಕೇಟ್ ಕೇಳುತ್ತಿರೊ ವಿಚಾರವಾಗಿ ಮಾತನಾಡಿ, ಈರೇಶ ಅಂಚಟಗೇರಿ ಅವರು ತಮ್ಮ ಆಸೆಯಂತೆ ಟಿಕೆಟ್ ಕೇಳಿದ್ದಾರೆ. ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುತ್ತೆ, ನನಗೆ ಯಾರೇ ಎದುರಾಳಿಯಾದ್ರೂ ಕಳೆದ ಬಾರಿಗಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ತೇನೆ ಎಂದು ಅರವಿಂದ ಬೆಲ್ಲದ್ ತಿಳಿಸಿದರು.