ಹುಬ್ಬಳ್ಳಿ: ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ನಾನು ಅವರನ್ನು ಸ್ವಾಗತ ಮಾಡುತ್ತೇನೆ ಎಂದು ಬಿಜೆಪಿ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಕೆಲವರಿಗೆ ಅಸಮಾಧಾನ ಇರೋದು ಸಹಜ. ಪ್ರತಿ ಕ್ಷೇತ್ರದಲ್ಲಿ ರಾಜ್ಯಾಧ್ಯಕ್ಷ ಆಗೋ ಸಾಮರ್ಥ್ಯ ಇರುವ ವ್ಯಕ್ತಿಗಳು ನಮ್ಮಲ್ಲಿ ಇದಾರೆ. ಆದ್ರೆ ಒಬ್ಬರೇ ಅಧ್ಯಕ್ಷರಾಗಬೇಕು, ಹೀಗಾಗಿ ಅಳೆದು ತೂಗಿ ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ.
ಬೇರೆ ಬೇರೆ ಕಾರಣದಿಂದ ವಿಜಯೇಂದ್ರ ಅವರ ಆಯ್ಕೆಯಾಗಿದೆ. ಹೀಗಾಗಿ ಅಸಮಾಧಾನ ಸಹಜ. ಆದ್ರೆ ಸಿ.ಟಿ. ರವಿ ಹೇಗೆ ಅಂತಾ ನನಗೆ ಗೊತ್ತು. ಎರಡು ದಿನ ಮತ್ತೆ ಅವರೇ ಮುಂದೆ ನಿಂತು ಎಲ್ಲ ಸರಿ ಮಾಡ್ತಾರೆ ಎಂದರು.
ದೀಪಾವಳಿ ಉಡುಗೊರೆಯಾಗಿ ವಿಜಯೇಂದ್ರ ಅವರನ್ನು ನಮಗೆ ಕೊಟ್ಟಿದ್ದಾರೆ. ನಾವು ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡ್ತೀವಿ. ನಾವು ಹೆಚ್ಚಿನ ಲೋಕಸಭೆ ಸೀಟ್ ಗೆದ್ದು ಕೇಂದ್ರ ನಾಯಕರಿಗೆ ಕೊಡುಗೆ ಕೊಡ್ತೀವಿ. ನಾವು ಮೂರನೇ ಸಲ ಮೋದಿಯವರನ್ನು ಪ್ರಧಾನಿಯನ್ನು ಮಾಡಬೇಕಿದೆ. ಅದೊಂದೇ ನಮ್ಮ ಮುಂದಿರುವ ಗುರಿ ಎಂದರು.
ಈ ಸರ್ಕಾರ ಐದು ವರ್ಷ ಇರಲಿ ಎಂದು ಬಯಸುತ್ತೇನೆ. ಜನರಿಗೆ ಆಮಿಷ ತೋರಿಸಿ ಅಧಿಕಾರಕ್ಕೆ ಬಂದಿದ್ದಾರೆ. ಅವರ ಆಂತರಿಕ ಜಗಳದಲ್ಲಿಯೇ ಸರ್ಕಾರ ಬಿದ್ದು ಹೋಗುತ್ತೆ. ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೀತಿದೆ. ಆದರೆ ಈ ಸರ್ಕಾರ ಬಹಳ ದಿನ ಇರುವುದಿಲ್ಲ ಸ್ವಲ್ಪ ಕಾದು ನೋಡಿ ಎನ್ನುವ ಮೂಲಕ ಪರೋಕ್ಷವಾಗಿ ರಾಜ್ಯದಲ್ಲಿ ಆಪರೇಶನ್ ಕಮಲ ನಡೀತಿದೆ ಎಂದು ನಿರಾಣಿ ಒಪ್ಪಿಕೊಂಡಿದ್ದಾರೆ.