ಧಾರವಾಡ: ತಾಳ್ಮೆ ಕಳೆದುಕೊಂಡ ಬಸ್ ಕಂಡಕ್ಟರ್ವೊಬ್ಬ ವಿದ್ಯಾರ್ಥಿನಿಯ ಕಪಾಳಕ್ಕೆ ಬಾರಿಸಿದ ಘಟನೆ ಧಾರವಾಡದ ಕೆಲಗೇರಿ ಬಡಾವಣೆ ಬಳಿ ನಡೆದಿದೆ.
ಕೆಲಗೇರಿ ನಿವಾಸಿಯಾದ ಪ್ರಕೃತಿ ಎಂಬಾಕೆಗೆ ಕಂಡಕ್ಟರ್ ಕಪಾಳಮೋಕ್ಷ ಮಾಡಿದ್ದಾರೆ.
ರಶ್ ಇದ್ದ ಬಸ್ಸಿನಲ್ಲಿ ಕಂಡಕ್ಟರ್ ಹಣವನ್ನು ಎಣಿಸಲು ಮುಂದಾಗಿದ್ದರು. ಈ ವೇಳೆ ಅಚಾನಕ್ ಆಗಿ ವಿದ್ಯಾರ್ಥಿನಿ ಪ್ರಕೃತಿಯ ಬ್ಯಾಗ್ ಕಂಡಕ್ಟರ್ಗೆ ಟಚ್ ಆಗಿದೆ. ಆಗ ಕಂಡಕ್ಟರ್ ಕೈಯಲ್ಲಿದ್ದ ಟಿಕೆಟ್ ಹಣವು ಕೆಳಗೆ ಬಿದ್ದಿತ್ತು. ಇದರಿಂದ ಕೆರಳಿ ಕೆಂಡವಾದ ಕಂಡಕ್ಟರ್ ಸಿಟ್ಟಿನಲ್ಲಿ ವಿದ್ಯಾರ್ಥಿನಿಯ ಕಪಾಳಕ್ಕೆ ಹೊಡೆದಿದ್ದಾರೆ. ನೋವಿನಿಂದ ಬಸ್ ಇಳಿದ ಬಾಲಕಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.
ಕಂಡಕ್ಟರ್ ಹೊಡೆತಕ್ಕೆ ಕೆನ್ನೆ ಮೇಲೆ ಬರೆ ಬಿದ್ದಿತ್ತು ಇದರಿಂದ ಆಕ್ರೋಶಗೊಂಡ ಪಾಲಕರು ಹಾಗೂ ಗ್ರಾಮಸ್ಥರು ಕಂಡಕ್ಟರ್ ವರ್ತನೆಗೆ ಕಿಡಿಕಾರಿ ದಿಢೀರ್ ಪ್ರತಿಭಟನೆ ನಡೆಸಿದರು.
ಕಂಡಕ್ಟರ್ ಇಲ್ಲಿಗೆ ಬಂದು ಕ್ಷಮೆ ಕೇಳುವಂತೆ ಪಟ್ಟು ಹಿಡಿದರು. ಬಳಿಕ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗ್ರಾಮಸ್ಥರ ಮನವೊಲಿಸಲು ಮುಂದಾದರು. ಕೊನೆಗೆ ಪ್ರತಿಭಟನಾ ಸ್ಥಳಕ್ಕೆ ಬಂದ ಕಂಡಕ್ಟರ್ ಪಾಲಕರ ಬಳಿ ಕ್ಷಮೆ ಕೇಳಿದ್ದಾರೆ.