ಹುಬ್ಬಳ್ಳಿ : ಬಿಜೆಪಿ ಆಡಳಿತದ ರೈತ ವಿರೋಧಿ ಕಾಯ್ದೆ, ಭ್ರಷ್ಟಾಚಾರ, ಕೋವಿಡ್ ಸಂದರ್ಭದಲ್ಲಿನ ದುರಾಡಳಿ ಮತ್ತು ಬೆಲೆ ಏರಿಕೆಯ ಅಂಶಗಳನ್ನು ಇಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಆಡಳಿತ ಪಕ್ಷವನ್ನು ಸೋಲಿಸುತ್ತೇವೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆ 25 ಸ್ಥಾನಗಳಲ್ಲಿ ಕಳೆದ ಬಾರಿ ಕಾಂಗ್ರೆಸ್ 14 ಸ್ಥಾನಗಳನ್ನು ಗೆದ್ದಿತ್ತು. ಅದರಂತೆ ಈ ಬಾರಿಯೂ 14ಕಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ ಎಂದರು.
ಪ್ರಧಾನಿ ಮೋದಿಯವರ ದೇಶದಲ್ಲಿ ಆಡಳಿತಕ್ಕೆ ಬಂದ ನಂತರ ಪ್ರತಿವರ್ಷ ಒಂದು ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ಅವರ ಪ್ರಕಾರ ಏಳು ವರ್ಷದಲ್ಲಿ 14 ಕೋಟಿ ಜನರಿಗೆ ಉದ್ಯೋಗ ನೀಡಬೇಕಾಗಿತ್ತು. ಆದರೆ ಈಗ ಎಷ್ಟೋ ಜನರು ಉದ್ಯೋಗ ಕಳೆದುಕೊಂಡು ಅವರ ಕುಟುಂಬಗಳು ಸಹ ಬೀದಿಗೆ ಬಂದಿವೆ ಎಂದು ತಿಳಿಸಿದರು.
ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದಿದ್ದರು. ಯಾರ ಖಾತೆಗೂ 15 ರೂಪಾಯಿ ಬಂದಿಲ್ಲ. ಬರೀ ಸುಳ್ಳು ಅಶ್ವಾಸನೆ ನೀಡುವ ಮೂಲಕ ಜನಸಾಮಾನ್ಯರ ಹಾದಿ ತಪ್ಪಿಸಿ ಮೋಸ ಮಾಡುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಬಂದ ಹಿನ್ನೆಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಕೃಷಿ ಕಾಯ್ದೆಗಳನ್ನು ಬೇಗ ರದ್ದು ಮಾಡಿದ್ದರೆ ನೂರಾರು ರೈತರು ಬದುಕುತ್ತಿದ್ದರು. ಒಂದುವರೆ ವರ್ಷದ ನಂತರ ಅವರಿಗೆ ಜ್ಞಾನೋದಯವಾಗಿದೆ. ದೇಶದ್ಯಾಂತ ರೈತರು ಬೀದಿಗೆ ಬಂದು ಹೋರಾಟ ಮಾಡುವುದು ತಪ್ಪುತ್ತಿತ್ತು ಎಂದರು.
ಅಕಾಲಿಕ ಮಳೆಯಾಗಿ ಸಾವಿರಾರೂ ರೈತರ ಬೆಳೆ ನಾಶವಾಗಿ ಸಂಕಷ್ಟದಲ್ಲಿದ್ದಾರೆ. ಅವರಿಗೆ ತಕ್ಷಣ ಪರಿಹಾರ ನೀಡಬೇಕು. ಆದರೆ ಆಡಳಿತ ಸರ್ಕಾರದ ಅದರ ಬಗ್ಗೆ ಚಿಂತನೆ ಮಾಡುವ ಬದಲು ಜನಸ್ವರಾಜ್ ಯಾತ್ರೆ ಎಂದು ಸಮಮಯ ಹಾಳು ಮಾಡುತ್ತಿದ್ದಾರೆ. ನಿಜವಾಗಲೂ ಇವರಿಗೆ ಹೃದಯ ಕರುಣೆ ಇದ್ದರೆ ತಕ್ಷಣ ಕೇಂದ್ರದಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಪ ಸದಸ್ಯ ಆರ್ .ವಿ ವೆಂಕಟೇಶ, ಮಾಜಿ ಸಚಿವ ಸಂತೋಷ ಲಾಡ್, ಶಾಸಕ ಶ್ರೀನಿವಾಸ ಮಾನೆ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಅನಿಲಕುಮಾರ ಪಾಟೀಲ, ಹು-ಧಾ ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ, ನಾಗರಾಜ ಛಬ್ಬಿ ಇದ್ದರು.