ಬೆಳಗಾವಿ : ರಾಜ್ಯದ ಸರ್ಕಾರಿ ಶಾಲಾ ಮಕ್ಕಳ ಅಪೌಷ್ಠಿಕತೆ ನಿವಾರಣೆಗಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ಹಾಗೂ ಬಾಳೆಹಣ್ಣು ನೀಡುವುದಾಗಿ ಆದೇಶಿಸಿತ್ತು.
ಈ ಮಧ್ಯೆ ಮೊಟ್ಟೆ ವಿತರಣೆಗೆ ವಿರೋಧ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಬಾಳೆ ಹಣ್ಣಿನಲ್ಲಿ ಮೊಟ್ಟೆಯಷ್ಟು ಪೌಷ್ಠಿಕಾಂಶ ಇಲ್ಲ ಎಂಬ ಕಾರಣಕ್ಕೆ ಶೇಂಗಾ ಮಿಠಾಯಿ ನೀಡಲು ಚಿಂತನೆ ನಡೆಸಿದೆ.
ಆದರೆ, ಈ ಯೋಜನೆ ಜಾರಿಗೆ ಬರಲು ಕೊಂಚ ಸಮಯ ತಗಲುವ ಸಾಧ್ಯತೆ ಇದೆ. ಯಾಕೆಂದರೆ ಕೆಎಎಫ್ಗೆ ಈ ಮಿಠಾಯಿ ಸ್ಯಾಂಪಲ್ಸ್ ನೀಡುವಂತೆ ಇಲಾಖೆ ಸೂಚಿಸಿದೆ. ಪೌಷ್ಠಿಕಾಂಶದಿಂದ ಕೂಡಿದ ಈ ಮಿಠಾಯಿ ವಿತರಣೆಗೆ ತಜ್ಞರು ಒಪ್ಪಿಗೆ ಸೂಚಿಸಿದ್ದರೆ, ಬಾಳೆಹಣ್ಣು ಬೇಡ ಎನ್ನುವ ಮಕ್ಕಳು ಶೇಂಗಾ ಮಿಠಾಯಿಯನ್ನು ಸೇವಿಸಬಹುದಾಗಿದೆ.
ಮೊಟ್ಟೆ ಸೇವಿಸದ ಮಕ್ಕಳು ಬಾಳೆಹಣ್ಣು ಹಾಗೂ ಶೇಂಗಾ ಮಿಠಾಯಿ ಪಡೆದುಕೊಳ್ಳಬಹುದಾಗಿದೆ. ಕಲ್ಯಾಣ ಕರ್ನಾಟಕದ ಕೊಪ್ಪಳ, ಬೀದರ್, ಯಾದಗಿರಿ, ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು ಸೇರಿದಂತೆ ಬಿಜಾಪುರ ಜಿಲ್ಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಅಪೌಷ್ಠಿಕತೆ ಮತ್ತು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷಾ ವರದಿಯಲ್ಲಿ ತಿಳಿದು ಬಂದಿತ್ತು.
ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಪೌಷ್ಠಿಕತೆ ನಿವಾರಣೆಗಾಗಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದಲ್ಲಿ 3 ದಿನಗಳ ಕಾಲ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡಲು ಮುಂದಾಗಿತ್ತು. ಇದೀಗ, ಇದರ ಮುಂದುವರೆದ ಭಾಗವಾಗಿ ಶೇಂಗಾ ಚಿಕ್ಕಿ ನೀಡಲು ಚಿಂತನೆ ನಡೆದಿದೆ. ಎಲ್ಲವೂ ಅಂದುಕೊಂಡಂತೆಯಾದರೆ ಮಕ್ಕಳು ಪೌಷ್ಟಿಕಾಂಶ ಭರಿತ ಶೇಂಗಾ ಚಿಕ್ಕಿ(ಮಿಠಾಯಿ)ಯನ್ನೂ ಸೇವಿಸಬಹುದಾಗಿದೆ.