ಬೆಳಗಾವಿ : ಇಂದು ಬೆಳಗಾವಿಯಲ್ಲಿ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಂದ ಶಂಕುಸ್ಥಾಪನೆ ನೆರವೇರಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂದು ಬೆಳಗ್ಗೆ ಬೆಳಗಾವಿಗೆ ಆಗಮಿಸಿದ್ದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗಡ್ಕರಿಯವರನ್ನು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಸದ್ಯ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ರಿಮೋಟ್ ಒತ್ತುವುದರ ಮೂಲಕ 5 ರಾಷ್ಟ್ರೀಯ ಹೆದ್ದಾರಿಗೆ ಗಡ್ಕರಿ ಚಾಲನೆ ನೀಡಿದ್ದಾರೆ.
ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ
238 ಕಿ.ಮೀ. ಉದ್ದದ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
1. ಬೆಳಗಾವಿ-ಸಂಕೇಶ್ವರ
2.ಸಂಕೇಶ್ವರ-ಮಹಾರಾಷ್ಟ್ರ ಷಟ್ಪಥ ರಸ್ತೆ
3. ಚೋರ್ಲಾ-ಜಾಂಬೋಟಿ-ಬೆಳಗಾವಿ ನಡುವಿನ ದ್ವಿಪಥ ರಸ್ತೆ
4. ವಿಜಯಪುರ-ಮುರಗುಂಡಿ(ಎನ್.ಎಚ್-548ಬಿ),
5. ಸಿದ್ದಾಪುರ-ವಿಜಯಪುರ(ಎನ್.ಎಚ್-561ಎ) ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಈ ವೇಳೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ನಿತಿನ್ ಗಡ್ಕರಿ ಅವರು ಕರ್ನಾಟಕಕ್ಕೆ ಅತೀ ಹೆಚ್ಚು ಅನುದಾನ ನೀಡಿದ್ದಾರೆ. ಹಿಂದಿನ ಎಲ್ಲ ದಾಖಲೆ ಮೀರಿ ಪ್ರಧಾನಿ ಮೋದಿಯವರು ಗ್ರಾಮ ಸಡಕ್ ಯೋಜನೆಗೆ ಅನುದಾನ ನೀಡಿದ್ದಾರೆ. 2014ರವರೆಗೆ 91,000 ಕಿ.ಮೀ. ರಸ್ತೆ ನಿರ್ಮಾಣವಾಗಿತ್ತು. ಪ್ರಧಾನಿ ಮೋದಿ, ಗಡ್ಕರಿ ಅಧಿಕಾರಕ್ಕೆ ಬಂದ ಬಳಿಕ ಈಗ 1.41 ಲಕ್ಷ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ.
ನಿತಿನ್ ಗಡ್ಕರಿ ಅವರು ಹೇಳಿದ ಕೆಲಸವನ್ನ ಮಾಡಿ ತೋರಿಸುತ್ತಾರೆ. ಎಲ್ಲಾ ರೋಡ್ ಅಂಡರ್ ಪಾಸ್ಗಳನ್ನ ಗಡ್ಕರಿ ಅವರು ಮಾಡಿ ಕೊಡ್ತಾರೆ. ಯುಪಿಎ ಅವಧಿಯಲ್ಲಿ ನಮ್ಮ ರಾಜ್ಯಕ್ಕೆ ಒಟ್ಟು ಅನುದಾನ ಕೊಟ್ಟಿದ್ದು 8ಸಾವಿರ ಕೋಟಿ. ಏಳು ವರ್ಷದ ಕಮ್ಮಿ ಅವಧಿಯಲ್ಲಿ ನಾವು 42ಸಾವಿರ ಕೋಟಿ ಅನುದಾನ ಕೊಟ್ಟಿದ್ದೇವೆ. ಅನುದಾನ ಕೊಡುವಾಗ ಗಡ್ಕರಿ ರಾಜಕೀಯ ಲಾಭ ನೋಡಿ ಕೊಟ್ಟಿಲ್ಲ. ನಮಗೆ ಅನುದಾನ ಕೊಟ್ಟಿಲ್ಲ ಅಂತಾ ಗಡ್ಕರಿ ವಿರುದ್ಧ ಒಬ್ಬ ಲೋಕಸಭಾ ಸದಸ್ಯ ಹೇಳಿಲ್ಲ. ಅವರನ್ನ ಗಡ್ಕರಿ ಅಂತಾ ಕರಿಯಲ್ಲ ರೋಡ್ಕರಿ ಅಂತಾ ಕರೆಯುತ್ತಾರೆ ಎಂದು ರಾಜ್ಯಕ್ಕೆ ಅತೀ ಹೆಚ್ಚು ಅನುದಾನ ನೀಡಿದ್ದಕ್ಕೆ ನಿತಿನ್ ಗಡ್ಕರಿ ಅವರನ್ನ ಪ್ರಹ್ಲಾದ್ ಜೋಶಿ ಅಭಿನಂದಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಬೆಳಗಾವಿಯಲ್ಲಿ ಇಂದು ರಸ್ತೆ ಕ್ರಾಂತಿ ಆಗುತ್ತಿದೆ. ಇಂದು ಐದು ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆಯಾಗಿದೆ ಎಂದರು. ಪಕ್ಕದ ಮಹಾರಾಷ್ಟ್ರ, ಗೋವಾ ಹಾಗೂ ಇತರೆ ಜಿಲ್ಲೆಗಳಿಗೆ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಇತ್ತು. ಐದು ರಾಷ್ಟ್ರೀಯ ಹೆದ್ದಾರಿಗಳನ್ನ ಇಂದು ಲೋಕಾರ್ಪಣೆ ಮಾಡುತ್ತಿದ್ದೇವೆ. ಇದರ ಹಿಂದೆ ಇರುವ ಶಕ್ತಿ ಪ್ರಧಾನಿ ನರೇಂದ್ರ ಮೋದಿ. ಮೋದಿ ಅವರ ಕನಸು ನನಸು ಮಾಡುತ್ತಾ ರಸ್ತೆ ಕ್ರಾಂತಿಯನ್ನ ನಿತಿನ್ ಗಡ್ಕರಿ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಒಂದು ರಸ್ತೆಯನ್ನ ಅಭಿವೃದ್ಧಿ ಮಾಡಿದ್ರೇ ನೂರುಬಾರಿ ಪ್ರಚಾರ ಪಡೆಯುತ್ತಿದ್ದರು. ನಿತಿನ್ ಗಡ್ಕರಿ ಅವರು ಅತೀ ಹೆಚ್ಚು ರಸ್ತೆಗಳನ್ನ ಅಭಿವೃದ್ಧಿ ಮಾಡುವ ಕೆಲಸ ಮಾಡ್ತಿದ್ದಾರೆ. ಮಹಾರಾಷ್ಟ್ರ ಗಡಿ ನಿಪ್ಪಾಣಿಯಿಂದ ಕಿತ್ತೂರವರೆಗೂ ಜಲಶಕ್ತಿ ಯೋಜನೆ ಪ್ರಾರಂಭವಾಗುತ್ತೆ. ಕರ್ನಾಟಕದಲ್ಲಿ ಪ್ರಥಮವಾಗಿ ಜಲಶಕ್ತಿ ಯೋಜನೆ ಆರಂಭ ಮಾಡುತ್ತೇವೆ. ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಉತ್ಪಾದನೆಯಾಗಲಿದೆ. ಮೋದಿ, ಗಡ್ಕರಿ, ಜೋಶಿ ಆಶೀರ್ವಾದದೊಂದಿಗೆ ಅಭಿವೃದ್ಧಿಯಾಗುತ್ತೆ ಎಂದು ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರು ಮತ್ತು ಸ್ಥಳೀಯ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.