ಬೆಳಗಾವಿ: ಅಪರಿಚಿತ ವಾಹನವೊಂದು ಹರಿದು ತನ್ನ ಪತ್ನಿಯ ಸೀಮಂತ ಕಾರ್ಯಕ್ಕೆಂದು ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ಯೋಧ ಮೃತಪಟ್ಟಿರುವ ಘಟನೆ ಬೆಳಗಾವಿ ತಾಲೂಕಿನ ಎನ್.ಎಚ್.4 ರಸ್ತೆಯ ಹಿರೇಬಾಗೇವಾಡಿ ಹತ್ತಿರದ ರೈಸ್ ಮಿಲ್ ಹತ್ತಿರ ಗುರುವಾರ ನಡೆದಿದೆ.
ಮರಾಠಾ ಇನ್ಫೆಂಟ್ರಿಯಲ್ಲಿ ಸೈನಿಕರಾಗಿದ್ದ ಸವದತ್ತಿ ತಾಲೂಕಿನ ಹೊಸೂರು ಗ್ರಾಮದ ಪ್ರಕಾಶ ಮಡಿವಾಳಪ್ಪಾ ಸಂಗೊಳ್ಳಿ (28) ಮೃತಪಟ್ಟಿರುವ ಯೋಧ. ಈ ಕುರಿತು ಮೃತ ಯೋಧನ ಸಹೋದರ ಹಿರೇಬಾಗೇವಾಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮೃತಪಟ್ಟ ಪ್ರಕಾಶ ಅವರ ಪತ್ನ ಗರ್ಭಿಣಿಯಾಗಿದ್ದರಿಂದ ಅವರ ಸೀಮಂತ ಕಾರ್ಯಕ್ರಮಕ್ಕೆಂದು ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದರು. ಗುರುವಾರ ಬೆಳಗ್ಗೆ ಬೆಳಗಾವಿಗೆ ಹೋಗಿ ಬರುವುದಾಗಿ ಹೇಳಿ ಹೊಸೂರು ಗ್ರಾಮಕ್ಕೆ ಬೈಕ್ನಲ್ಲಿ ವಾಪಸಾಗುತ್ತಿದ್ದ. ಈ ವೇಳೆ ಬೆಳಗಾವಿಯಿಂದ ಧಾರವಾಡದ ಕಡೆಗೆ ಹೋಗುತ್ತಿದ್ದ ವಾಹನವೊಂದು ಅವರ ಮೇಲೆ ಹರಿದಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಅಸುನೀಗಿದ್ದಾರೆ. ನಂತರ ವಿಷಯ ತಿಳಿದ ಕುಟುಂಬದ ಸದಸ್ಯರು ಸ್ಥಳಕ್ಕೆ ಬಂದಿದ್ದಾರೆ. ನಂತರ ಮೃತನ ಸಹೋದರ ದೂರು ನೀಡಿದ್ದಾರೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.